ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಒಬ್ಬ ಸಿನಿಮಾ ನಟ ಮೊದಲ ಬಾರಿಗೆ ಪಕ್ಷ ಸ್ಥಾಪಿಸಿ ಚೊಚ್ಚಲವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಈ ಮಟ್ಟದಲ್ಲಿ ಜಯಗಳಿಸಿರುವುದು ದೇಶಾದ್ಯಂತ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಒಟ್ಟಾರೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷಗಳಲ್ಲಿ ಟಿ ವಿ ಕೆ ಮೊದಲ ಸ್ಥಾನದಲ್ಲಿದೆ. ಆದರೂ ಕೂಡ ಬಹುಮತಕ್ಕೆ ಆರರಿಂದ ಏಳು ಸ್ಥಾನಗಳ ಕೊರತೆ ಇರುವ ಕಾರಣ ಸರ್ಕಾರ ರಚನೆಗೆ ಅಡ್ಡಿಯಾಗುತ್ತಿದೆ. ಆದರೆ ನಟ ವಿಜಯ್ ಮಾಡಿಕೊಂಡ ಆ ಒಂದು ತಪ್ಪು, ಅವರನ್ನು ಸಿಎಂ ಆಗುವುದನ್ನು ತಡೆಯುತ್ತಿದೆ.


ಯಸ್, ತಮಿಳುನಾಡಿನ ರಾಜಕೀಯದಲ್ಲಿ (Tamil Nadu Politics) ಇತ್ತೀಚೆಗೆ ನಡೆದ ಘಟನೆಯೊಂದು ನಟ ವಿಜಯ್ (Vijay) ಅವರ ಮುಖ್ಯಮಂತ್ರಿಯಾಗುವುದನ್ನು (Cheif Minister) ಪದೇ ಪದೇ ಹಿಂದಕ್ಕೆ ತಳ್ಳುತ್ತಿದೆ. ಸಾಮಾನ್ಯವಾಗಿ ಅತಿದೊಡ್ಡ ಪಕ್ಷದ ನಾಯಕ ಮೊದಲು ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತಾನೆ. ವಿಜಯ್ ಕೂಡ ಅದನ್ನೇ ಮಾಡಲು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರ ಬರೆದರು. ಆದರೆ, ರಾಜಕೀಯ ತಜ್ಞರು ಹಾಗೂ ಇಂಡಿಯಾ ಟುಡೇ ಹೀಗೆ ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಈ ಪತ್ರದಲ್ಲಿ ಪ್ರಮುಖ ದೋಷಗಳು ನಡೆದಿವೆ. ಹಾಗಾದ್ರೆ ಆ ತಪ್ಪು ಯಾವುದು? ವಿಜಯ್ ಎಡವಿದ್ದು ಎಲ್ಲಿ?
ಸಾಂಪ್ರದಾಯಿಕವಾಗಿ, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಅತಿದೊಡ್ಡ ಪಕ್ಷದ ನಾಯಕನಾಗಿ ವಿಜಯ್ ತಮ್ಮ ಪಕ್ಷದ ಶಾಸಕರ ಸಹಿ ಇರುವ ಪತ್ರವನ್ನು ಮಾತ್ರ ರಾಜ್ಯಪಾಲರಿಗೆ ನೀಡಬೇಕಿತ್ತು. ಆಗ ರಾಜ್ಯಪಾಲರು ವಿಜಯ್ಗೆ ಸರ್ಕಾರ ರಚಿಸಲು ಅವಕಾಶ ನೀಡಿ, ನಂತರ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಿದ್ದರು. ಆದರೆ, ವಿಜಯ್ ತಮ್ಮ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿಯನ್ನೂ ಸೇರಿಸಿದ್ದರಿಂದ, ರಾಜ್ಯಪಾಲರು ಇದನ್ನು ಮೈತ್ರಿ ಸರ್ಕಾರದ ಪ್ರಸ್ತಾಪವೆಂದು ಪರಿಗಣಿಸಿದರು. ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಬೇಕಾದ 118 ಶಾಸಕರ ಬೆಂಬಲ ಇಲ್ಲದ ಕಾರಣ, ರಾಜ್ಯಪಾಲರು ವಿಜಯ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಅತಿದೊಡ್ಡ ಪಕ್ಷದ ನಾಯಕನಾಗಿ ಮಾತ್ರ ಹಕ್ಕು ಮಂಡಿಸಿದ್ದರೆ, ವಿಜಯ್ ಈಗಾಗಲೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು ಎನ್ನುವುದು ತಜ್ಞರ ಅಭಿಪ್ರಾಯ. ಸದ್ಯಕ್ಕೆ ತಮಿಳುನಾಡು ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.
ಈ ಎಲ್ಲ ರಾಜಕೀಯ ಕುತಂತ್ರಗಳ ನಡುವೆಯೇ, ತಮಿಳುನಾಡು ವಿಧಾನಸಭೆಯ ಪ್ರಸ್ತುತ ಅವಧಿ ಮೇ 10, 2026ರಂದು ಕೊನೆಗೊಳ್ಳಲಿದೆ. ಅಂದರೆ, ಆವರೆಗೆ ವಿಜಯ್ ಮತ್ತು ಟಿವಿಕೆ 118 ಎಂಬ ‘ಮ್ಯಾಜಿಕ್ ಸಂಖ್ಯೆ’ ತಲುಪಲು ಅಗತ್ಯವಾದ ಬೆಂಬಲವನ್ನು ಒದಗಿಸಬೇಕಾಗಿದೆ. ಇಲ್ಲದಿದ್ದರೆ, ರಾಜ್ಯಪಾಲರು ಇತರ ಆಯ್ಕೆಗಳತ್ತ ಗಮನ ಹರಿಸಬಹುದು.

