Home » ಶಿವ-ಪಾರ್ವತಿಯ ವಿವಾಹ ಸ್ಥಳದಲ್ಲೇ ಮದುವೆಯಾದ ಸುಳ್ಯ-ಪುತ್ತೂರು ಜೋಡಿ!

ಶಿವ-ಪಾರ್ವತಿಯ ವಿವಾಹ ಸ್ಥಳದಲ್ಲೇ ಮದುವೆಯಾದ ಸುಳ್ಯ-ಪುತ್ತೂರು ಜೋಡಿ!

0 comments

ಸುಳ್ಯ: ಮದುವೆಗಳನ್ನು ವೈಭವೋಪೋತವಾಗಿ ಕಲ್ಯಾಣಮಂಟಪದಲ್ಲೋ, ರೆಸಾರ್ಟ್‌ ನಲ್ಲೋ, ಬೀಚ್‌ ಸೈಡ್‌ನಲ್ಲೋ ಮಾಡುವುದು ಇತ್ತೀಚಿಗೆ ಟ್ರೆಂಡಿಯಾಗಿದೆ. ಆದರೆ ಸುಳ್ಯ-ಪುತ್ತೂರಿನ ಜೋಡಿಯೊಂದು ಶಿವ-ಪಾರ್ವತಿಯರು ವಿವಾಹ ಸ್ಥಳವೆಂದು ಪ್ರಸಿದ್ಧಿ ಪಡೆದ ಉತ್ತರಾಖಂಡದ ತ್ರಿಯುಗಿನಾರಾಯಣ ದೇವಾಲಯದಲ್ಲಿ ಸಪ್ತಪದಿ ತುಳಿದಿರುವುದು ವಿಶೇಷತೆಯಾಗಿದೆ.

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ನಿವಾಸಿ ಗೀತಾತೀರ್ಥ ಕುಮಾರ್‌ ಹಾಗೂ ತೀರ್ಥ ಕುಮಾರ್‌ ಅವರ ಪುತ್ರ ಮೌನಿಶ್‌ ಕೆ.ಟಿ ವಿವಾಹವು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮರೀಲ್‌-ಕಾಡುಮನೆ “ಅಕ್ಷಯನಿಧಿ” ನಿವಾಸಿ ಶ್ರೀಮತಿ ಜಯಲೋಕನಾಥ್‌ ಹಾಗೂ ನಿವೃತ್ತ ಎಸ್‌ಐ ಲೋಕನಾಥ ಗೌಡ ಅವರ ಪುತ್ರಿ ಅಕ್ಷಯಾ ಕೆ.ಎಲ್‌ ಅವರ ಜೊತೆ ಮೇ.6 ರಂದು ಉತ್ತರಾಖಂಡ ರಾಜ್ಯದ ರುದ್ರಯಾಗ ಜಿಲ್ಲೆಯ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ನಡೆದಿದೆ.

ತ್ರಿಯುಗಿ ನಾರಾಯಣ ದೇವಾಲಯವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಪ್ರಾಚೀನ ಮತ್ತು ಪವಿತ್ರ ದೇವಾಲಯವಾಗಿದ್ದು, ಇದು ಶಿವ-ಪಾರ್ವತಿಯರ ವಿವಾಹ ನಡೆದ ಸ್ಥಳವೆಂದು ನಂಬಲಾಗಿದೆ. 1,980 ಮೀಟರ್ ಎತ್ತರದಲ್ಲಿರುವ ಈ ದೇವಾಲಯದಲ್ಲಿ, ಮದುವೆಯ ಸಾಕ್ಷಿಯಾಗಿ ಮೂರು ಯುಗಗಳಿಂದಲೂ ಅಖಂಡ ಧುನಿ (ನಿರಂತರ ಅಗ್ನಿ) ಉರಿಯುತ್ತಿದೆ.

ಮೌನಿಶ್‌ ಸಿವಿಲ್‌ ಇಂಜಿನಿಯರ್‌ ಮತ್ತು ಅಕ್ಷಯಾ ಎಂಎಸ್ಸಿ ಮುಗಿಸಿ ಕಂಪನಿ ಉದ್ಯೋಗದಲ್ಲಿದ್ದಾರೆ. ಮೌನಿಶ್‌ ಆಧ್ಯಾತ್ಮಿಕ ನಂಬಿಕೆಯುಳ್ಳ ವ್ಯಕ್ತಿ. ಇವರು ಭಾರತದ ಹೆಚ್ಚಿನ ತೀರ್ಥ ಕ್ಷೇತ್ರಗಳನ್ನು ಭೇಟಿ ಮಾಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ತ್ರಿಯುಗಿ ನಾರಾಯಣ ದೇವಸ್ಥಾನದ ಕುರಿತು ತಿಳಿದಿತ್ತು. ಹೀಗಾಗಿ ತಮ್ಮ ಆಸೆಯ ಪ್ರಕಾರ ಅಲ್ಲೇ ವಿವಾಹವಾಗಿದ್ದಾರೆ.

banner

You may also like