ಪುತ್ತೂರು: ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮಾವಳಿ 2016 ರಂತೆ ಪ್ರತಿ ತ್ಯಾಜ್ಯ ಉತ್ಪಾದಕರೂ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಹಸ್ತಾಂತರಿಸುವ ಮೊದಲೇ ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡುವುದು ಕಡ್ಡಾಯವಾಗಿದೆ.

ಅದರಂತೆ ಪುತ್ತೂರು ನಗರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡದೆ ತ್ಯಾಜ್ಯವನ್ನು ವಾಹನಕ್ಕೆ ಹಸ್ತಾಂತರಿಸುತ್ತಿರುವ ವಿವಿಧ ಮನೆ, ವಾಣಿಜ್ಯ ಮಳಿಗೆ. ಶಾಲಾ – ಕಾಲೇಜು ಇತ್ಯಾದಿಗಳಿಗೆ ನಿಯಮಾನುಸಾರ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಈಗಾಗಲೇ ನಗರಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ತ್ಯಾಜ್ಯ ವಿಂಗಡಣೆಯಲ್ಲಿ ವಿಫಲರಾದವರಿಗೆ ದಂಡ ವಿಧಿಸಲಾಗಿದೆ. ಉತ್ಪತ್ತಿಯಾದ ಘನತ್ಯಾಜ್ಯ ವಸ್ತುಗಳನ್ನು ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಹಸ್ತಾಂತರಿಸುವ ಸಂದರ್ಭಸ್ವೀಕರಿಸಲಾಗುವ ತ್ಯಾಜ್ಯದ ಪ್ರಮಾಣಕ್ಕನುಸಾರವಾಗಿ ವಿವಿಧ ಸ್ಥರದಲ್ಲಿ ರೂ :500/-, 1000/ – ಹೀಗೆ ಮುಂದುವರಿದಂತೆ ರೂ :25,000 ವರೆಗೂ ದಂಡ ವಿಧಿಸಲು ಅವಕಾಶವಿದೆ.
ದಂಡನೆಯ ನಂತರವೂ ವಿಂಗಡಣೆ ವಿಫಲರಾದವರಿಂದ ತ್ಯಾಜ್ಯ ಸಂಗ್ರಹಣೆಯನ್ನು ಸ್ಥಗಿತ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ನಗರಸಭಾ ಪ್ರಕಟಣೆ ತಿಳಿಸಿರುವ ಕುರಿತು ವರದಿಯಾಗಿದೆ.

