

Belagavi: ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರವಾಗಿ ಹರಕೆಗಳನ್ನು ಕಟ್ಟಿಕೊಂಡು ಅಲ್ಲದೆ ಅವುಗಳನ್ನು ಚೀಟಿಯಲ್ಲಿ ಬರೆದು ದೇವರ ಹುಂಡಿಯಲ್ಲಿ ಹಾಕುವ ಪ್ರಕರಣಗಳನ್ನು ನೋಡಿದ್ದೇವೆ. ಇದೀಗ ಮತ್ತೊಂದು ಅಂಥದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದಿನ ಜಾತ್ರೆ ಒಳಗೆ ನಮ್ಮ ಅತ್ತೆ ಸಾಯಲಿ ಎಂದು ಬರೆದ ಹರಕೆ ಚೀಟಿ ಎಂದು ದೇವರ ಹುಂಡಿಯಲ್ಲಿ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಹುಲಿ ಕಾಂತೇಶ್ವರ ದೇವರ ಹುಂಡಿಯಲ್ಲಿ ಫೆಬ್ರವರಿ 19ರಂದು ದೇವಾಲಯ ಕಮಿಟಿಯವರು ಹುಂಡಿ ತೆರೆದು ಕಾಣಿಕೆ ಹಣ ಎಣಿಸುವಾಗ ನೂರು ಮತ್ತು ಹತ್ತು ರೂಪಾಯಿ ನೋಟಿನೊಳಗೆ ಸುತ್ತಲಾಗಿದ್ದ ಚೀಟಿ ಪತ್ತೆಯಾಗಿದೆ.
ಅದರಲ್ಲಿ ದೇವರೇ ನನ್ನ ಕಷ್ಟ ದೂರಮಾಡು, ಮುಂದಿನ ಜಾತ್ರೆಯೊಳಗೆ ನಮ್ಮ ಅತ್ತೆ ಸಾಯಲಿ ಎಂದು ಬರೆಯಲಾಗಿದೆ. ಫೆಬ್ರವರಿ 11 ರಿಂದ 17ರ ವರೆಗೆ ಹುಲಿ ಕಾಂತೇಶ್ವರ ದೇವರ ಜಾತ್ರೆ ನಡೆದಿದ್ದು, ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಇದನ್ನು ಅತ್ತೆ ಮೇಲಿನ ದ್ವೇಷದಿಂದ ಸೊಸೆ ಬರೆದದ್ದೋ ಅಥವಾ ಅಳಿಯ ಬರೆದದ್ದೋ ಎಂದು ತಿಳಿದಿಲ್ಲ.