Home » ಅಂಜನಾದ್ರಿಗೆ ಕೊಟ್ಟ ದೇಣಿಗೆಯಲ್ಲಿ ಉದ್ಯಮಿಯಿಂದ ಮಹಾ ಗೋಲ್‌ಮಾಲ್? 2.5 ಕೋಟಿ ರೂ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಚಿನ್ನ

ಅಂಜನಾದ್ರಿಗೆ ಕೊಟ್ಟ ದೇಣಿಗೆಯಲ್ಲಿ ಉದ್ಯಮಿಯಿಂದ ಮಹಾ ಗೋಲ್‌ಮಾಲ್? 2.5 ಕೋಟಿ ರೂ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಚಿನ್ನ

0 comments

ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನೀಡಿದ್ದ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಜನರನ್ನು ಯಾಮಾರಿಸಿದ್ದಾರೆ ಎನ್ನಲಾಗಿದೆ. 

ಹೌದು, ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಅವರು ಹನುಮ ಜನ್ಮ ಭೂಮಿಯಾದ ಅಂಜನಾದ್ರಿ, ಆಂಜನೇಯ ದೇವಸ್ಥಾನಕ್ಕೆ ಬರೋಬ್ಬರಿ 2.5 ಕೋಟಿ ಮೌಲ್ಯದ ಚಿನ್ನಾಭರಣವನ್ನು ನೀಡಿದ್ದರು. ಇಷ್ಟೊಂದು ಬೆಲೆಬಾಳುವ ಆಭರಣದಲ್ಲಿ ಈಗ ಕೇವಲ 26 ಗ್ರಾಂ ಮಾತ್ರ ಚಿನ್ನವಿದೆ ಎಂಬುದು ಬಯಲಾಗಿದೆ. ಹೀಗಾಗಿ ಇದೀಗ ಅವರು ನೀಡಿದ್ದ ಆಭರಣಗಳ ಖಚಿತತೆ ಮತ್ತು ಮೌಲ್ಯದ ಬಗ್ಗೆ ಬಿಲ್ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಕಳೆದ ಮೇ 8ರಂದು ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ದಂಪತಿಗಳ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ಈ ಆಭರಣಗಳ ಮೌಲ್ಯ ಸುಮಾರು 2.50 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಆಶಯದೊಂದಿಗೆ ಈ ಬೃಹತ್ ದೇಣಿಗೆ ನೀಡಲಾಗಿದೆ ಎಂದು ಅಂದು ಸಂಭ್ರಮಿಸಲಾಗಿತ್ತು. ಆದರೆ, ಇವುಗಳನ್ನು ಅಧಿಕೃತವಾಗಿ ದೇವಸ್ಥಾನದ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ಜಿಲ್ಲಾಡಳಿತವು ಪರಿಶೀಲನೆ ನಡೆಸಿದಾಗ  2.50 ಕೋಟಿ ಮೌಲ್ಯದ ಚಿನ್ನ ಎಂದು ಹೇಳಲಾದ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಪತ್ತೆಯಾಗಿದೆ. ಇವು ಸಂಪೂರ್ಣ ಬಂಗಾರದ ಆಭರಣಗಳಲ್ಲ, ಬದಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ (Gold Plated) ಮಾಡಲಾದ ಆಭರಣಗಳು ಎಂಬುದು ತಪಾಸಣೆಯಲ್ಲಿ ದೃಢಪಟ್ಟಿದೆ.

ಹೀಗಾಗಿ ದಾನ ನೀಡಿರುವ ಆಭರಣಗಳ ನಿಖರ ಮೌಲ್ಯ ಮತ್ತು ಚಿನ್ನದ ಪ್ರಮಾಣವನ್ನು ದೃಢೀಕರಿಸುವ ಅಧಿಕೃತ ಬಿಲ್ ನೀಡುವಂತೆ ಮಹೇಶ ರೆಡ್ಡಿ ಅವರಿಗೆ ಸೂಚಿಸಲಾಗಿದೆ. ಇದುವರೆಗೆ ಉದ್ಯಮಿಯಿಂದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲದ ಕಾರಣ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

banner

You may also like