ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿದ್ದಾರೆ ಎನ್ನಲಾದ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ನಡೆಸುವ ವೇಳೆ ಶವಗಳ ಶೋಧನೆಗಾಗಿ ಧರ್ಮಸ್ಥಳದ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಜೆಸಿಬಿಗಳ ಮುಖಾಂತರ ಗುಂಡಿ ತೋಡಿಸಲಾಗಿತ್ತು. ಇದೀಗ ಊರು ತುಂಬಾ ಗುಂಡಿ ತೋಡಿದ ಜೆಸಿಬಿ ಗಳಿಗೆ ಇನ್ನು ಹಣ ಬಂದಿಲ್ಲ ಎನ್ನಲಾಗಿದೆ.


ಹೌದು, ಧರ್ಮಸ್ಥಳ ವಿರುದ್ಧ ಆರೋಪ ಕೇಳಿ ಬಂದಾಗ ಎಸ್ಐಟಿ ತನಿಖೆ ಶುರುವಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧನೆ ನಡೆಸಲಾಗಿತ್ತು. ಈ ಸಂದರ್ಭ ಹಲವು ಕೂಲಿಯಾಳುಗಳು ದುಡಿದಿದ್ದು, ಜೆಸಿಬಿಯನ್ನೂ ಬಳಸಲಾಗಿತ್ತು. ಕೆಲ ದಿನಗಳಲ್ಲಿ ಜೆಸಿಬಿ ಬೇಕಾಗುತ್ತದೆ, ಬೇರೆ ಹೋಗಬೇಡಿ ಅಂತ ಜೆಸಿಬಿಯನ್ನು ಸುಮ್ಮನೆ ನಿಲ್ಲಿಸಿದ್ದರು. ಇದನ್ನು ಜೆಸಿಬಿ ಮಾಲೀಕರು ಲೆಕ್ಕ ಹಾಕದೇ ಕೇವಲ ದುಡಿದ ಗಂಟೆಯನ್ನು ಮಾತ್ರ ಲೆಕ್ಕ ಹಾಕಿ ಒಟ್ಟು 71,500 ರೂ. ಬಿಲ್ ಮಾಡಿ ಕೊಟ್ಟಿದ್ದಾರೆ. ಆದರೆ ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ.
ಎಸ್ಐಟಿ ತಂಡಕ್ಕೆ ಬೇಕಾದ ಕೂಲಿಯಾಳುಗಳು, ಜೆಸಿಬಿ, ಇತರ ಸಾಮಗ್ರಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಸ್ಥಳೀಯ ಧರ್ಮಸ್ಥಳ ಗ್ರಾಪಂಗೆ ವಹಿಸಲಾಗಿತ್ತು. ಅದರಂತೆ ಸ್ಥಳೀಯ ಗ್ರಾಪಂ ಎಸ್ಐಟಿ ತಂಡದ ನಿರ್ದೇಶನದಂತೆ ಎಲ್ಲಅಗತ್ಯಗಳನ್ನು ಒದಗಿಸಿದ್ದರು. ಆದರೆ ಪಂಚಾಯಿತಿ ಹಣವನ್ನು ಎಸ್ಐಟಿ ಕೆಲಸಕ್ಕೆ ಭರಿಸುವಂತಿಲ್ಲ ಎನ್ನಲಾಗಿದೆ. ಇದನ್ನು ಎಸ್ಐಟಿ ಟೀಂ ಭರಿಸಬೇಕಂತೆ. ಹೀಗಾಗಿ ಬಾಕಿ ಬಿಲ್ನ್ನು ಯಾರಲ್ಲಿ ಕೇಳುವುದು ಎನ್ನುವ ಗೊಂದಲವಿದೆ. ಇದಷ್ಟೇ ಅಲ್ಲದೆ, ಶಾಮಿಯಾನ , ಈರು, ಹಾರೆ, ಪಿಕಾಸು ಸಾಮಾಗ್ರಿಗಳಿಗೆ , ಅವುಗಳ ತಂದ ಕಟ್ಟಡಗಳ ಬಾಡಿಗೆ ಸೇರಿ ಸುಮಾರು 2 ಲಕ್ಷ ರೂಪಾಯಿ ಬಾಕಿ ಇದೆಯಂತೆ.
