Home » ಜೂ 6 ರಂದು ಜಿರಳೆ ಪಕ್ಷದಿಂದ ನೀಟ್‌ ಸೋರಿಕೆ ವಿರುದ್ಧ ಹೋರಾಟ

ಜೂ 6 ರಂದು ಜಿರಳೆ ಪಕ್ಷದಿಂದ ನೀಟ್‌ ಸೋರಿಕೆ ವಿರುದ್ಧ ಹೋರಾಟ

0 comments

ಆನ್‌ಲೈನ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸ್ಥಾಪನೆ ಮಾಡಿ ಭಾರೀ ಸಂಚಲನ ಉಂಟು ಮಾಡಿದ ಅಭಿಜಿತ್‌ ದೀಪ್ಕೆ, ಇದೀಗ ಜೂ.6 ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ವಾಸಿಯಾಗಿರುವ ದೀಪ್ಕೆ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ದೀಪ್ಕೆ, ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. “ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಗಿತ್ತು. ಹೀಗಾಗಿ ಶಿಕ್ಷಣ ಸಚಿವ ಪ್ರಧಾನ್‌ ಅವರ ರಾಜೀನಾಮೆ ಕೇಳಲು ಭಾರತಕ್ಕೆ ಮರಳಲು ನಿರ್ಧಾರ ಮಾಡಿದ್ದು, ಶನಿವಾರ ಬೆಳಿಗ್ಗೆ ಎಲ್ಲರೂ ನನ್ನನ್ನು ಏರ್ಪೋರ್ಟ್‌ನಲ್ಲಿ ಭೇಟಿಯಾಗಿ, ನಾವೆಲ್ಲ ಸಂಸತ್‌ ಮಾರ್ಗದ ಪೊಲೀಸ್‌ ಠಾಣೆಗೆ ತೆರಳಿ, ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಅನುಮತಿ ಕೇಳೋಣ” ಎಂದು ತಿಳಿಸಿದ್ದಾರೆ.

‘ಈ ದೇಶ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರಿಗೂ ಸೇರಿದ್ದು. ಇದು ನಮ್ಮ ಭವಿಷ್ಯದ ಪ್ರಶ್ನೆ. ನಮ್ಮದು ಪ್ರಜಾಪ್ರಭುತ್ವದ ದೇಶ ಎಂಬುದನ್ನು ನಾನಿಂದೂ ನಂಬುತ್ತೇನೆ. ನಮಗೆ ಪ್ರತಿಭಟನೆ ನಡೆಸಲು ಅನುಮತಿ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾನು ಗಾಂಧಿ, ಅಂಬೇಡ್ಕರ್‌, ಭಗತ್‌ ಸಿಂಗ್‌ ಹಾಗೂ ನೆಹರೂ ಅವರ ದೊಡ್ಡ ಅನುಯಾಯಿ. ಪ್ರಜಾಪ್ರಭುತ್ವದಲ್ಲಿ ನಮಗೆ ಧ್ವನಿಯೆತ್ತುವ ಹಕ್ಕು ನೀಡಿದ ಸಂವಿಧಾನದ ಮೇಲೆ ನನಗೆ ಎಲ್ಲಕ್ಕಿಂತ ಹೆಚ್ಚು ನಂಬಿಕೆಯಿದೆ’ ಎಂದಿದ್ದಾರೆ.

You may also like