Chattisghar: ಸರಕಾರಿ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬರಿಗೆ ನಿಮ್ಮ ಫೈಲ್ ಸಿಗುತ್ತಿಲ್ಲ, ಎಲ್ಲಿಟ್ಟಿದ್ದೇನೆ ಎಂದು ನೆನಪಾಗುತ್ತಿಲ್ಲವೆಂದು ದರ್ಪ ಮೆರೆದಿದ್ದಾರೆ. ಆಗ ಅವರ ಮೇಜಿನ ಮೇಲೆ ಬಾದಾಮಿ ಸುರಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.


ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯ ತಿಫ್ರಾ ಹೌಸಿಂಗ್ ಬೋರ್ಡ್ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಆಸ್ತಿ ದಾಖಲೆಗಳ ವಿಚಾರವಾಗಿ ಸತತವಾಗಿ ಕಚೇರಿಗೆ ಅಲೆದರೂ ಫೈಲ್ ಸಿಕ್ಕಿಲ್ಲ. ಆಗ ಅಧಿಕಾರಿ ನಿಮ್ಮ ಫೈಲ್ ಎಲ್ಲಿಟ್ಟಿದ್ದೇನೆ ಎಂದು ನನಗೆ ನೆನಪಾಗುತ್ತಿಲ್ಲ ಎಂದು ಸತಾಯಿಸಿದ್ದಾರೆ. ಹೀಗೆ ಫೈಲ್ ಸಿಗದಿದ್ದಕ್ಕೆ ಬೇಸತ್ತ ವ್ಯಕ್ತಿ ಅವರ ಮೇಜಿನ ಮೇಲೆ ಬಾದಾಮಿ ತಂದು ಸುರಿದು ‘ತಿಂದುಬಿಡಿ ನೆನಪಾಗಬಹುದು’ ಎಂದು ವ್ಯಂಗ್ಯವಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸರ್ಕಾರಿ ಕೆಲಸಗಳಲ್ಲಿನ ವಿಳಂಬವನ್ನು ಎತ್ತಿ ತೋರಿಸಿದೆ.
ವರದಿಗಳ ಪ್ರಕಾರ, ಈ ವ್ಯಕ್ತಿ ತನ್ನ ಆಸ್ತಿಗೆ ಸಂಬಂಧಿಸಿದ ಕೆಲಸಕ್ಕಾಗಿ ಹಲವು ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಅಧಿಕಾರಿಗಳು ಪ್ರತಿ ಬಾರಿಯೂ ‘ಫೈಲ್ ಹುಡುಕುತ್ತಿದ್ದೇವೆ’ ಅಥವಾ ‘ನೆನಪಿಲ್ಲ’ ಎಂಬ ಹಾರಿಕೆ ಉತ್ತರ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿಹೋದ ವ್ಯಕ್ತಿ, ಹೀಗೆ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದಂತೆ, ಅನೇಕ ಜನರು ಆ ವ್ಯಕ್ತಿಯ ಸೃಜನಾತ್ಮಕ ಪ್ರತಿಭಟನೆಯನ್ನು ಶ್ಲಾಘಿಸಿದ್ದಾರೆ. “ಭ್ರಷ್ಟಾಚಾರ ಮತ್ತು ಕೆಲಸದ ವಿಳಂಬಕ್ಕೆ ಇದು ಸೂಕ್ತ ಉತ್ತರ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ
