Home » Tamilunadu : 9 ಮಂದಿ ಪೊಲೀಸರಿಗೆ ಮರಣದಂಡನೆ ಪ್ರಕರಣ – ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದದ್ದು ಕಾನ್​ಸ್ಟೇಬಲ್​ ರೇವತಿ

Tamilunadu : 9 ಮಂದಿ ಪೊಲೀಸರಿಗೆ ಮರಣದಂಡನೆ ಪ್ರಕರಣ – ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದದ್ದು ಕಾನ್​ಸ್ಟೇಬಲ್​ ರೇವತಿ

0 comments

Tamilunadu : ಆರು ವರ್ಷಗಳ ಹಿಂದೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ತೂತುಕುಡಿ ಜಿಲ್ಲೆಯಲ್ಲಿ ವ್ಯಾಪಾರಿ ಪಿ ಜಯರಾಜ್ ಮತ್ತು ಅವರ ಪುತ್ರ ಜೆ ಬೆನಿಕ್ಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಸೋಮವಾರ ಮರಣದಂಡನೆ ವಿಧಿಸಿದೆ. ಈ ಒಂಬತ್ತು ಮಂದಿಗೂ ಶಿಕ್ಷೆ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಲೇಡಿ ಕಾನ್ಸ್ಟೇಬಲ್.

ಮೊಬೈಲ್‌ ಫೋನ್‌ ಮಾರಾಟದ ಅಂಗಡಿ ನಡೆಸುತ್ತಿದ್ದ ಜಯರಾಜ್‌, ಮಗ ಬೆನಿಕ್ಸ್‌ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ, ನಿಗದಿತ ಅವಧಿ ಮೀರಿ ವ್ಯಾಪಾರ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೂನ್ 19, 2020ರಂದು ಪೊಲೀಸರು ಅವರನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅವರಿಗೆ ಗಂಭೀರವಾದ ಗಾಯಗಳಾಗಿದ್ದವು. ಹೀಗಾಗಿ ಕೋವಿಲ್‌ಪಟ್ಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಜೂನ್‌ 23ರಂದು ಮೃತಪಟ್ಟರು. ಪೊಲೀಸರು ನೀಡಿದ ಚಿತ್ರಹಿಂಸೆಯಿಂದಾಗಿ ತಂದೆ, ಮಗ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು. ಈ ಘಟನೆಗೆ ತಮಿಳುನಾಡು ಮಾತ್ರವಲ್ಲದೇ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣವನ್ನು ಮುಚ್ಚಿ ಹಾಕಲು ಸುಳ್ಳು ಸಾಕ್ಷ್ಯ ನೀಡಿದ್ದಲ್ಲದೇ ಹಲವು ಯತ್ನಗಳನ್ನು ಆರೋಪಿಗಳು ಮಾಡಿದ್ದರೂ ಸಹ ಈ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಪ್ರತ್ಯಕ್ಷದರ್ಶಿ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ಈ ಎಲ್ಲಾ ಕ್ರೂರಿಗಳನ್ನು ಎದುರು ಹಾಕಿಕೊಂಡು ಧೈರ್ಯವಾಗಿ ಸಾಕ್ಷಿ ಹೇಳಿದ್ದರಿಂದ ಈಗ ಈ ಯಮಕಿಂಕರರಿಗೆ ಮಧುರೈನ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ. ಹೀಗೆ ತನ್ನ ಕ್ರೂರಿ ಸಹೋದ್ಯೋಗಿಗಳ ವಿರುದ್ಧ ಧೈರ್ಯವಾಗಿ ನಿಂತು ಸಾಕ್ಷಿ ಹೇಳಿದವರೇ ಮಹಿಳಾ ಕಾನ್ಸ್‌ಟೇಬಲ್ ರೇವತಿ.

ಹೌದು, ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ರೇವತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದಲ್ಲದೇ ಪ್ರಮುಖ ಸಾಕ್ಷಿಯಾಗಿದ್ದರು. ಅವರೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್‌ ಠಾಣೆಯಲ್ಲಿದ್ದ ರಕ್ತದ ಕಲೆಗಳು, ರಕ್ತದ ಕಲೆಗಳನ್ನು ಹೊಂದಿದ್ದ ಪೊಲೀಸ್ ಲಾಠಿಗಳು, ಹಾಗೂ ಟೇಬಲ್‌ಗಳನ್ನು ಸಾಕ್ಷ್ಯ ನಾಶವಾಗುವ ಮೊದಲೇ ಜಪ್ತಿ ಮಾಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

2020ರಲ್ಲಿ ಈ ಭೀಕರ ಘಟನೆ ನಡೆದಾಗ ರೇವತಿ, ಸಂತಾನಕುಲಂ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದರು. ಈ ದೌರ್ಜನ್ಯದಲ್ಲಿ ಭಾಗಿಯಾಗಿದ್ದ ಪೊಲೀಸರೆಲ್ಲರೂ ಪ್ರಭಾವಿ ವ್ಯಕ್ತಿಗಳೇ ಆಗಿದ್ದರು. ಆದರೆ, ರೇವತಿ ಮಾತ್ರ ತೀರ ಸಾಮಾನ್ಯ ಹಾಗೂ ಚಿಕ್ಕ ವಯಸ್ಸಿನ ಮಹಿಳಾ ಕಾನ್‌ಸ್ಟೆಬಲ್ ಆಗಿದ್ದರು. ಇಷ್ಟಾದರೂ ಕಾನೂನಿನ ಕಣ್ಣಿಗೆ ಮಣ್ಣೆರೆಚಲು ಮುಂದಾದ ತಪ್ಪಿತಸ್ಥರ ವಿರುದ್ಧ ಕೊಲೆ ಘಟನೆಯ ಇಂಚಿಂಚೂ ಸಾಕ್ಷಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

banner

ಈ ಪ್ರಕರಣವನ್ನು ಆರಂಭದಲ್ಲಿ ತನಿಖೆ ಮಾಡಿದ ಮ್ಯಾಜಿಸ್ಟ್ರೇಟ್ ಭಾರತಿದಾಸನ್, ಸಂತಾನಕುಲಂ ಪೊಲೀಸ್ ಠಾಣೆಗೆ ಬಂದಾಗ ಕಾನ್‌ಸ್ಟೆಬಲ್ ರೇವತಿ ಪ್ರಕರಣವನ್ನು ಬಿಚ್ಚಿಡಲು ಸಹಾಯ ಮಾಡಿದರು. ಕೇಸ್​ಗೆ ಸಹಾಯಹಸ್ತ ನೀಡುವ ಮುನ್ನ ಅವರು ಕೇಳಿದ್ದು ಇಷ್ಟೇ. “ಸರ್, ನಾನು ನಿಮಗೆ ಎಲ್ಲವನ್ನೂ, ಪ್ರತಿಯೊಂದು ವಿವರವನ್ನು, ಮುಚ್ಚಿಟ್ಟಿರುವ ಸತ್ಯವನ್ನು ಪೂರ್ತಿಯಾಗಿ ಹೇಳುತ್ತೇನೆ. ಆದರೆ, ನಾನು ಇಬ್ಬರು ಪುಟ್ಟ ಹೆಣ್ಣುಮಕ್ಕಳ ತಾಯಿ. ನನ್ನ ಮಕ್ಕಳ ಸುರಕ್ಷತೆ ಮತ್ತು ಕೆಲಸದ ಸುರಕ್ಷತೆಯನ್ನು ನೀವು ಖಾತರಿಪಡಿಸಬಹುದೇ?” ಎಂದು ಮ್ಯಾಜಿಸ್ಟ್ರೇಟ್ ಬಳಿ ಕೇಳಿಕೊಂಡರು. ಇದಕ್ಕೆ ಮ್ಯಾಜಿಸ್ಟ್ರೇಟ್ ಒಪ್ಪಿದ ಬಳಿಕ ರೇವತಿಯವರು ಅಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ನಡೆದ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. 

ರೇವತಿ ಅವರೊಬ್ಬರ ಸಾಕ್ಷಿಯಿಂದ ಇಂದು ನ್ಯಾಯಾಲಯವು ಒಂಬತ್ತು ಆರೋಪಿ ಪೊಲೀಸ್ ಅಧಿಕಾರಿಗಳಿಗೆ ಆರು ವರ್ಷಗಳ ಬಳಿಕ ಮರಣದಂಡನೆ ವಿಧಿಸಲು ಸಾಧ್ಯವಾಯಿತು. ಅಷ್ಟಕ್ಕೂ ಕಾನ್​ಸ್ಟೇಬಲ್​ ರೇವತಿ ಅವರು ಸತ್ಯದ ಪರವಾಗಿ ನಿಲ್ಲುವುದಾಗಿ ನಿರ್ಧರಿಸಿದ್ದರಿಂದ ಮಾತ್ರ ಇಷ್ಟೆಲ್ಲ ನಡೆಯಿತು. ಇಲ್ಲದಿದ್ದರೆ ಸತ್ಯ ಮಣ್ಣಿನಲ್ಲಿ ಮಣ್ಣಾಗುತ್ತಿತ್ತು. ಅದ್ಭುತ ಮಹಿಳೆ ಮತ್ತು ಖಾಕಿ ರೇವತಿ ಅವರಿಗೆ ದೇಶವ್ಯಾಪಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ಮರಣದಂಡನೆಗೆ ಗುರಿಯಾದ ಪೊಲೀಸ್ ಅಧಿಕಾರಿಗಳು:

ಇನ್ಸ್‌ಪೆಕ್ಟರ್‌ ತೇಗು, ಸಬ್-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್, ಮತ್ತು ಇತರ 6 ಪೊಲೀಸ್ ಸಿಬ್ಬಂದಿಗಳಾದ ಮುರುಗನ್, ಸಾಮದುರೈ, ಮುತ್ತುರಾಜ್, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್, ವೇಯಿಲ್ ಮುತ್ತು.

ರೇವತಿಗೆ 24*7 ಭಾರಿ ಬಿಗಿ ಭದ್ರತೆ

9 ಕ್ರೂರಿ ಪೊಲೀಸರನ್ನು ಎದುರು ಹಾಕಿಕೊಂಡು ನ್ಯಾಯದ ಪರ ನಿಂತು ದಿಟ್ಟವಾಗಿ ಸಾಕ್ಷಿ ಹೇಳಿದ ರೇವತಿಯ ಜೀವಕ್ಕೆ ಈಗ ಅಪಾಯ ಇರುವುದು ಸಹಜ ಹೀಗಾಗಿ ಈ ಪ್ರಕರಣದಲ್ಲಿ ಸಾಕ್ಷಿ ಹೇಳಿದ ಆಕೆಗೆ ನ್ಯಾಯಾಲಯ ಭಾರಿ ಭದ್ರತೆ ಒದಗಿಸುವುದಕ್ಕೆ ಸೂಚನೆ ನೀಡಿದೆ. ತಮ್ಮ ಸಹೋದ್ಯೋಗಿಗಳಿಂದ ತೀವ್ರವಾದ ಒತ್ತಡ ಹಾಗೂ ಬೆದರಿಕೆಯ ನಡುವೆಯೂ ಅವರು ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್‌ ಅವರ ಭೀಕರ ಹತ್ಯೆಯ ಬಗ್ಗೆ ಸಾಕ್ಷಿ ನುಡಿದಿದ್ದರು. ತಂದೆ ಹಾಗೂ ಮಗನನ್ನು ಪೊಲೀಸ್ ಠಾಣೆಯೊಳಗೆ ಕೂಡಿ ಹಾಕಿ ರಾತ್ರಿಯೆಲ್ಲಾ ಅವರ ಮೇಲೆ ಲಾಠಿಯಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ ಎಂದು ಅವರು ವಿವರವಾದ ಮಾಹಿತಿ ನೀಡಿದ್ದರು.

ಹೀಗಾಗಿ ರೇವತಿ ಅವರಿಗೆ ಜೀವಭಯದ ಭೀತಿ ಇರುವುದರಿಂದಾಗಿ ಮದ್ರಾಸ್ ಹೈಕೋರ್ಟ್ ಅವರ ಜೀವಕ್ಕೆ ಯಾವುದೇ ಅಪಾಯವಾಗದಂತೆ ಅವರನ್ನು ರಕ್ಷಿಸುವಂತೆ ಅವರಿಗೆ 24*7 ಗಂಟೆಗಳ ಕಾಲ ರಕ್ಷಣೆ ನೀಡುವಂತೆ ಹಾಗೂ ಆಕೆಗೆ ಕುಟುಂಬದೊಂದಿಗೆ ಕಳೆಯಲು ತಿಂಗಳ ಕಾಲ ರಜೆಯನ್ನು ನೀಡಿದೆ.

You may also like