ಉಳ್ಳಾಲ: ಕೈ ಕಾಲು ತೊಳೆಯಲು ಕೊಳಕ್ಕೆ ಇಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬ್ಲಿಮೊಗರು ಝರಿ ಎಂಬಲ್ಲಿ ಶನಿವಾರ ರಾತ್ರಿ ಬೆಳಕಿಗೆ ಬಂದಿರುವ ಕುರಿತು ವರದಿಯಾಗಿದೆ.


ಅಂಬ್ಲಿಮೊಗರು ನಿವಾಸಿ ಶಿವರಾಮ ಅವರ ಪುತ್ರ ಸೃಜನ್ (17) ಮೃತ ಬಾಲಕ.
ಶನಿವಾರ ಮಧ್ಯಾಹ್ನ ಹೊತ್ತಿಗೆ ನಾಲ್ವರು ಗೆಳೆಯರು ಮೀನು ಹಿಡಿಯಲು ತೆರಳಿದ್ದು, ಮೀನು ಹಿಡಿದ ಬಳಿಕ ನಾಲ್ವರು ಸಮೀಪದಲ್ಲೇ ಇರುವ ಇಟ್ಟಿಗೆ ಗೆ ಮಣ್ಣು ತೆಗೆಯಲೆಂದು ಮಾಡಲಾದ ನೀರು ತುಂಬಿದ ಪಾಯದಲ್ಲಿ ಕೈ ಕಾಲು ತೊಳೆಯಲು ಇಳಿದಿದ್ದರು. ಅಲ್ಲಿ ಸೃಜನ್ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾನೆ.
ಇತರ ಮೂವರ ಪೈಕಿ ಓರ್ವನು ಕೈಯಿಂದ ಹಿಡಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಆತನೂ ನೀರಿಗೆ ಬೀಳುವ ಹಂತದಲ್ಲಿದ್ದು. ಕೂಡಲೇ ಇತರ ಇಬ್ಬರು ಆತನನ್ನು ರಕ್ಷಿಸಿದ್ದಾರೆ. ಗಾಬರಿಗೊಂಡ ಈ ಮೂವರು ವಿಷಯವನ್ನು ಯಾರಿಗೂ ತಿಳಿಸದೆ ಮನೆಗೆ ತೆರಳಿದ್ದಾರೆ.
ಸಂಜೆಯಾದರೂ ಸೃಜನ್ ಮನೆಗೆ ಬಾರದಿರುವುದನ್ನು ಕಂಡು ಮನೆಮಂದಿ ಜತೆಗಿದ್ದವರಲ್ಲಿ ಪ್ರಶ್ನೆ ಮಾಡಿದ್ದು ಮೀನು ಹಿಡಿದ ಬಳಿಕ ಕೈ ಕಾಲು ತೊಳೆದು ದನಗಳ ಹುಡುಕಾಟಕ್ಕೆ ತೆರಳಿದ್ದಾನೆ ಎಂದು ತಿಳಿಸಿದ್ದರು. ಈ ಮಾತಿನಿಂದ ಸಂಶಯಗೊಂಡ ಮನೆಮಂದಿ ಗದರಿ ಕೇಳಿದಾಗ ಸತ್ಯ ಸಂಗತಿ ತಿಳಿಸಿದ್ದಾರೆ. ಕೂಡಲೇ ಕೊಣಾಜೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳ ಸಿಬಂದಿ ಹುಡುಕಾಡಿ ರಾತ್ರಿ 11.30ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

