ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ , ಗೃಹಪ್ರವೇಶದ ಔತಣದ ದಿನವೇ ಮನೆ ಯಜಮಾನ ಹಾಗೂ ಯುವ ವಾಗ್ಮಿ ಎನಿಸಿದ ವ್ಯಕ್ತಿ ಒಬ್ಬರು ಹೃದಯಘಾತದಿಂದ ಇಹಲೋಕ ತ್ಯಜಿಸಿದ ಘಟನೆ ಸಂಭವಿಸಿದೆ.


ಸಜಿಪನಡು ನಿವಾಸಿ ಪುತ್ತನಾಕ ಅವರ ಪುತ್ರ ಅಮೀರ್ ಅರ್ಶದಿ (36) ಮೃತ ವ್ಯಕ್ತಿ. ಹೊಸ ಮನೆಯಲ್ಲಿ ಬದುಕಿನ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದ ಅವರು, ಕೆಲವು ದಿನಗಳ ಹಿಂದೆ ಗೃಹಪ್ರವೇಶದ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಸೋಮವಾರ ಮಧ್ಯಾಹ್ನ ಔತಣಕೂಟಕ್ಕೆ ಬಂಧು-ಮಿತ್ರರನ್ನು ಆಹ್ವಾನಿಸಲು ರವಿವಾರ ತಡ ರಾತ್ರಿ ತನಕ ಫೋನ್ ಕರೆಗಳಲ್ಲಿ ತೊಡಗಿದ್ದರು. ಆದರೆ ಮಧ್ಯರಾತ್ರಿ ಅವರಿಗೆ ಹಠಾತ್ ಎದೆ ನೋವು ಕಾಣಿಸುಕೊಂಡಿದ್ದು, ಕ್ಷಣಾರ್ಧದಲ್ಲಿ ತತ್ ಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಿಲ್ಲ.
ಅಮೀರ್ ಅರ್ಶದಿ, ತಾಳಿಪಡು ಮಸ್ಚಿದುಲ್ ಹುದಾ ಮಸೀದಿಯಲ್ಲಿ ಕಳೆದ ಐದು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದರು. ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ಸುಮಾರು 3 ವರ್ಷಗಳ ಕಾಲ ಮದ್ರಸಾ ಅಧ್ಯಾಪಕರಾಗಿದ್ದರು. ಅವರು ತಂದೆ, ತಾಯಿ, ಪತ್ನಿ, ಪುತ್ರ-ಪುತ್ರಿಯನ್ನು ಅಗಲಿದ್ದಾರೆ.
