Home » ರೆಖ್ಯದಲ್ಲಿ ಲಾರಿಗೆ ಕಾರು ಅಡ್ಡಗಟ್ಟಿ ದರೋಡೆ ನಡೆಸಿದ್ದ ಪ್ರಕರಣ: ಬೆಂಗಳೂರು ಮಾಗಡಿಯ ನಂಜುಂಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ರೆಖ್ಯದಲ್ಲಿ ಲಾರಿಗೆ ಕಾರು ಅಡ್ಡಗಟ್ಟಿ ದರೋಡೆ ನಡೆಸಿದ್ದ ಪ್ರಕರಣ: ಬೆಂಗಳೂರು ಮಾಗಡಿಯ ನಂಜುಂಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

0 comments

ಬೆಳ್ತಂಗಡಿ: 2017ರ ಎಪ್ರಿಲ್ 8ರಂದು ರಾತ್ರಿ 10.15ರ ವೇಳೆಗೆ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿಗೆ ಕಾರು ಅಡ್ಡ ಇಟ್ಟು ಚಾಲಕನಿಗೆ ಚೂರಿಯಿಂದ ಗಾಯ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿ ಧರ್ಮಸ್ಥಳ ಠಾಣಾ ಪೊಲೀಸರಿಂದ ಬಂಧಿತನಾಗಿದ್ದ ಬೆಂಗಳೂರು ಮಾಗಡಿಯ ನಂಜುಂಡ ಎಂಬಾತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ಮಾ.13ರಂದು ವಜಾಗೊಳಿಸಿದೆ. ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿ ನಂಜುಂಡನ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಘಟನೆಯ ವಿವರ: 2017ರ ಎಪ್ರಿಲ್ ೮ರಂದು ಬೆಳಿಗ್ಗೆ ಚಿಕ್ಕಮಗಳೂರಿನ ಅಂಬಲೆಯ ರಾಘವೇಂದ್ರ ಎಂಬವರು ಲಾರಿ(ಕೆ.ಎ.40-ಎ-2076)ಯಲ್ಲಿ ಗೌರಿಬಿದನೂರಿನ ತೊಂಡೆಬಾವಿ ಎಂಬಲ್ಲಿಂದ ಸಿಮೆಂಟ್ ಲೋಡ್ ಮಾಡಿಕೊಂಡು ಉಡುಪಿ ಕಡೆಗೆ ಹೊರಟು ಅರಸೀಕೆರೆ ಮಾರ್ಗವಾಗಿ ಬರುತ್ತಾ ರಾತ್ರಿ 10.15ರ ವೇಳೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎಂಜಿರ ಎಂಬಲ್ಲಿಗೆ ತಲುಪಿ ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರಶಂಕೆ ಮಾಡಿ ಲಾರಿಗೆ ಹತ್ತುವ ಸಮಯ ಈ ಲಾರಿಗೆ ಒಂದು ಕಾರನ್ನು ಅಡ್ಡ ಇಟ್ಟು ಕಾರಿನಿಂದ 5 ಜನರು ಇಳಿದಿದ್ದರು. ಅವರ ಪೈಕಿ ಮೂರು ಮಂದಿ ಲಾರಿಯ ಎಡಬದಿಯ ಬಾಗಿಲು ತೆಗೆದು ನುಗ್ಗಿದ್ದರು. ಇನ್ನಿಬ್ಬರು ಬಲಬದಿಯಿಂದ ಒಳಗೆ ನುಗ್ಗಿದ್ದರು. ಅವರ ಪೈಕಿ ಓರ್ವ ಚೂರಿ ತೋರಿಸಿ ಚಾಲಕ ರಾಘವೇಂದ್ರ ಅವರನ್ನು ಹೆದರಿಸಿ ನಿನ್ನ ಹತ್ತಿರ ಏನೆಲ್ಲಾ ವಸ್ತುಗಳಿಗೆ ಅದನ್ನೆಲ್ಲಾ ಕೊಡು ಎಂದು ಹೇಳಿದ್ದ. ಚಾಲಕ ರಾಘವೇಂದ್ರ ಅವರು ತನ್ನಲ್ಲಿ ಹಣ ಇಲ್ಲ ಎಂದು ತಿಳಿಸಿದಾಗ ಒಬ್ಬನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದ. ಮತ್ತೋರ್ವ ಕೈಯಲ್ಲಿದ್ದ ಚೂರಿಯಿಂದ ರಾಘವೇಂದ್ರ ಅವರ ಎಡಕಾಲಿನ ಮೊಣಗಂಟೆಗೆ, ಎದೆಯ ಎಡಭಾಗಕ್ಕೆ ಹಾಗೂ ಬಲಭುಜಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿದ್ದ.

ಅಲ್ಲದೆ ರಾಘವೇಂದ್ರ ಅವರ ಚಡ್ಡಿಯ ಕಿಸೆಯಿಂದ 17 ಸಾವಿರ ರೂ ನಗದು ಹಣ ಮತ್ತು ಕರ್ಣಾಟಕ ಬ್ಯಾಂಕ್‌ನ ಎಟಿಎಂ ಇದ್ದ ಪರ್ಸ್ ಮತ್ತು 12 ಸಾವಿರ ರೂ ಬೆಲೆ ಬಾಳುವ ಮೊಬೈಲ್ ಫೋನ್ ಹಾಗೂ ಲಾರಿಯ ಕೀಯನ್ನು ಎಳೆದುಕೊಂಡು ಮಹೀಂದ್ರ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದರು. ನಂತರ ರಾಘವೇಂದ್ರ ಅವರು ಲಾರಿಯ ಒಳಗೆ ನೋಡಿದಾಗ ದರೋಡೆಕೋರರಿಗೆ ಸೇರಿದ ನೋಕಿಯಾ ಕಂಪನಿಯ ಮೊಬೈಲ್ ಫೋನ್ ಸಿಕ್ಕಿತ್ತು. ಚಾಲಕ ರಾಘವೇಂದ್ರ ಅವರು ಆ ದಾರಿಯಲ್ಲಿ ಬಂದವರಲ್ಲಿ ಘಟನೆಯ ಕುರಿತು ತಿಳಿಸಿ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2017ರ ಎ.9ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 65/2017ರಂತೆ ಐಪಿಸಿ 397ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳಾದ ಮಯಾಕೃಷ್ಣ@ಮಾಂಗ ಎ, ಮಣಿಕಂಠ ಮೂರ್ತಿ, ಪಿಂಟು@ಪ್ರಭು, ಕುರಲ್@ಕುಳ್ಳ ಮತ್ತು ನಂಜುಂಡ ವಿ ಅವರನ್ನು ಬಂಧಿಸಲಾಗಿತ್ತು. ನಂತರ ನಂಜುಂಡ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದ ಧರ್ಮಸ್ಥಳ ಠಾಣಾ ಪೊಲೀಸರು ನಂಜುಂಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಂಧಿತ ಆರೋಪಿ
ನಂಜುಡನಿಗೆ ಜಾಮೀನು ನೀಡಬೇಕು ಎಂದು ಆತನ ಪರ ವಕೀಲರು ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಲಿಖಿತ ತರ್ಕಾರರು ಸಲ್ಲಿಸಿ ಬಲವಾದ ವಾದ ಮಂಡಿಸಿದ್ದರು. ದಿವ್ಯರಾಜ್ ಹೆಗ್ಡೆ ಅವರ ವಾದ ಆಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಅವರು ಆರೋಪಿ ಪರ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದು ಆರೋಪಿ ನಂಜುಂಡನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

You may also like