ವಿಜಯಪುರ: ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ. ಪ್ರಕರಣದ ಮುಖ್ಯ ಆರೋಪಿ ಮಹೇಶ್ ತಳವಾರ್ ಮೇಲೆ ಫೈರಿಂಗ್ ನಡೆದಿದೆ. ಪೊಲೀಸರು ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.


ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಮಹೇಶ್ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಮಹೇಶನನ್ನು ಬಂಧಿಸಲೆಂದು ಹೋದಾಗ, ಓಡಿ ಹೋಗಲು ಯತ್ನ ಮಾಡಿದ ಮಹೇಶ್ ತಳವಾರ್ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದು, ದಾಳಿಗೆ ಯತ್ನ ಮಾಡಿದ್ದಾನೆ. ಎರಡು ಬಾರಿ ಗಾಳಿಯಲ್ಲಿ ಪೊಲೀಸರು ಗುಂಡು ಹಾರಿಸಿ ಎಚ್ಚರಿಸಿದ್ದು, ಆದರೆ ಮಹೇಶ್ ಇದಕ್ಕೆ ಜಗ್ಗದೆ ಕಲ್ಲಿನ ದಾಳಿ ಮಾಡಿದ್ದಾನೆ. ಹೀಗಾಗಿ ಕಾಲಿಗೆ ಗುಂಡು ಹಾರಿಸಿ ಮಹೇಶ್ ಬಂಧನ ಮಾಡಲಾಗಿದೆ. ಈತನನ್ನು ಸದ್ಯಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ಘಟನೆ ಸಂದರ್ಭ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇ 29 ರಂದು ಭೀಮಾತೀರದ ಗೋವಿಂದಪುರ ಗ್ರಾಮ ಜಮೀನಿನಲ್ಲಿ ಚಡಚಣದ ನಿರಾಳೆ ಕುಟುಂಬ 5 ಜನ ಹಾಗೂ ಇನ್ನೋರ್ವ ಸೇರಿ 6 ಜನರ ಭೀಕರ ಹತ್ಯೆ ನಡೆದಿತ್ತು.
