Home » ಜಮೀನು ಮಾರಲು ಮಕ್ಕಳಿಗೆ ವಿಷವಿಕ್ಕಿದ ತಂದೆ.

ಜಮೀನು ಮಾರಲು ಮಕ್ಕಳಿಗೆ ವಿಷವಿಕ್ಕಿದ ತಂದೆ.

0 comments

ವಿಜಯಪುರ: ಜಮೀನು ಮಾರಲು ಹೆಂಡತಿ ಒಪ್ಪದಕ್ಕೆ ತಂದೆಯೇ ಆಹಾರದಲ್ಲಿ ವಿಷ ಬೆರೆಸಿ ಮಗ ಹಾಗೂ ಮಗಳಿಗೆ ನೀಡಿದ ಪರಿಣಾಮವಾಗಿ ಮಗ ಅಸುನೀಗಿರುವ ಘಟನೆ ಗೋನಾಳ ಎಸ್.ಎಚ್.ನಲ್ಲಿ ನಡೆದಿದೆ.

ವಿಷ ಬೆರೆಸಿದ ಎಗ್ ರೈಸ್ ತಿಂದ ಮಗ ಶಿವರಾಜ ಅರಸನಾಳ(2) ಸಾವನ್ನಪ್ಪಿದ್ದಾನೆ. ಮಗಳು ರೇಣುಕಾ(5) ಸ್ಥಿತಿ ಗಂಭೀರವಾಗಿದ್ದು ವಿಜಯಪುರದ ಬಿದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಚಂದ್ರಶೇಖರ ಶಿವಪ್ಪ ಅರಸನಾಳ ಇಟಗಿ(ನಿಡಗುಂದಿ ತಾಲ್ಲೂಕು )ಗ್ರಾಮದವನು. ಮೈತುಂಬ ಸಾಲಮಾಡಿಕೊಂಡಿದ್ದನು. ಜಮೀನು ಮಾರಿದರೆ ಸಾಲ ತೀರಿಸಬಹುದೆಂದು ಹೆಂಡತಿಗೆ ಹೇಳಿದ್ದ. ಅವಳು ಅದಕ್ಕೊಪ್ಪದೆ ತನ್ನ ತವರು ಮನೆ ಗೋನಾಳ ಎಸ್.ಎಚ್.ಗೆ ತನ್ನೆರಡು ಮಕ್ಕಳೊಂದಿಗೆ ಬಂದಿದ್ದಳು. ಜೂನ್ 2ರಂದು ಸಂಜೆ ನಾಲ್ಕು ಗಂಟೆಗೆ ವಿಷ ಬೆರೆಸಿದ ಎಗ್ ರೈಸ್ ತಂದು ತನ್ನ ಪತ್ನಿ ಹಾಗೂ ಮಕ್ಕಳಿಗೆ ಕೊಟ್ಟಿದ್ದಾನೆ. ಆದರೆ, ಹೆಂಡತಿ ಮನೆ ಕೆಲಸದ ನಿಮಿತ್ತ ಮಕ್ಕಳಿಗೆ ತಿನ್ನಲು ಕೊಟ್ಟು ಮನೆಯೊಳಗೆ ಹೋಗಿ ಮರಳಿ ಬರುವುದರೊಳಗೆ ಮಕ್ಕಳು ವಾಂತಿ ಮಾಡಿಕೊಳ್ಳುತ್ತಿರುವುದು ಕಂಡ ಬಂದು ಸಂಶಯದಿಂದ ಮುದ್ದೇಬಿಹಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುವ ವೇಳೆ ಮಗ ಶಿವರಾಜ ಸಾವಿಗೀಡಾಗಿದ್ದಾನೆ.

ತನ್ನ ಗಂಡನ ಮೇಲೆ ಸಂಶಯವಿದೆ ಎಂದು ತಾಳಿಕೋಟೆ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾಳೆ. ಆರೋಪಿ ಚಂದ್ರಶೇಖರ ಅರಸನಾಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

banner

You may also like

Leave a Comment