Bengaluru : ವರ್ಗಾವಣೆಯ ಆಸೆಯಿಂದ ಐಟಿ ಅಧಿಕಾರಿಯೊಬ್ಬ ಗಿಳಿ ಶಾಸ್ತ್ರದ ಮೊರೆ ಹೋಗಿ ಬರೋಬ್ಬರಿ 35 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಅಘಾತಕಾರಿ ಘಟನೆ ನಡೆದಿದೆ.

ಯಸ್, ಬೆಂಗಳೂರಿನ ಕೋರಮಂಗಲದ ಐಟಿ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎಂಬುವವರು ವರ್ಗಾವಣೆಯ ಆಸೆಗೆ ಬಿದ್ದು, ಗಿಳಿಶಾಸ್ತ್ರದವನ ಮಾತನ್ನು ನಂಬಿ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಏನಿದು ಘಟನೆ?
ಕಳೆದ ಡಿಸೆಂಬರ್ನಲ್ಲಿ ಸತ್ಯನಾರಾಯಣ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬುವವನ ಪರಿಚಯವಾಗಿತ್ತು. ‘ನಿಮ್ಮ ಮುಖ ಲಕ್ಷಣ ನೋಡಿ ಭವಿಷ್ಯ ಹೇಳುತ್ತೇನೆ, ನಿಮಗೆ ಮುಂದೆ ತುಂಬಾ ಒಳ್ಳೆಯದಾಗಲಿದೆ’ ಎಂದು ಶೇಖರ್ ಅಧಿಕಾರಿಯನ್ನು ನಂಬಿಸಿದ್ದ. ಜೀವನದಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಾದರೆ ಒಂದು ಪೂಜೆ ಮಾಡಿಸಬೇಕು ಎಂದು ಶೇಖರ್ ಸಲಹೆ ನೀಡಿದ್ದ. ಇದನ್ನು ನಂಬಿದ ಸತ್ಯನಾರಾಯಣ ಅವರು ಆರಂಭದಲ್ಲಿ ಪೂಜೆಗಾಗಿ 50 ಸಾವಿರ ರೂಪಾಯಿ ಹಣ ನೀಡಿದ್ದರು. ಪೂಜೆ ಮುಗಿದ ನಂತರ ಶೇಖರ್ ಪದೇ ಪದೇ ಸತ್ಯನಾರಾಯಣ ಅವರಿಗೆ ಕರೆ ಮಾಡಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ.
ಕೆಲದಿನಗಳ ಬಳಿಕ ಮತ್ತೊಂದು ಕಥೆ ಸೃಷ್ಟಿಸಿದ ಶೇಖರ್, ‘ನಿಮ್ಮ ಮನೆಯಲ್ಲಿರುವ ಚಿನ್ನ ಹಾಗೂ ಬೆಳ್ಳಿ ವಸ್ತುಗಳಿಗೆ ಪೂಜೆ ಮಾಡಿಸಿದರೆ ವೃತ್ತಿ ಬದುಕಿನಲ್ಲಿ ಒಳ್ಳೆಯದಾಗಲಿದೆ. ಇಲ್ಲದಿದ್ದರೆ ಕೆಡುಕಾಗಲಿದೆ’ ಎಂದಿದ್ದ. ಇದರಿಂದ ಹೆದರಿದ ವೆಂಕಟ್, ಮನೆಯಲ್ಲಿದ್ದ 35 ಲಕ್ಷ ರೂ. ಮೌಲ್ಯದ ಆಭರಣ ತಂದುಕೊಟ್ಟಿದ್ದ. ಹಣ ಹಾಗೂ ಆಭರಣ ಪಡೆದ ಬಳಿಕ ಜ್ಯೋತಿಷಿ ಶೇಖರ್, ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಅಲ್ಲದೆ ಇನ್ನೂ ಪೂಜೆ ಮುಗಿದಿಲ್ಲ, ನಾಳೆ ಬಾ, ನಾಡಿದ್ದು ಬಾ’ ಎಂದು ಸತಾಯಿಸಿದ್ದಾನೆ. ಹೀಗೆ ಒಂದು ವಾರ ಕಾಲ ಸಬೂಬು ಹೇಳುತ್ತಾ ಕಾಲ ಕಳೆದಿದ್ದಾನೆ. ಸಂಶಯಗೊಂಡ ಸತ್ಯನಾರಾಯಣ ಅವರು ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ, ಅಲ್ಲಿ ಶೇಖರ್ ಇರಲಿಲ್ಲ. ಆತ ತನ್ನ ಗಿಳಿ ಮತ್ತು ಪಂಜರದೊಂದಿಗೆ ಪರಾರಿಯಾಗಿದ್ದ. ತಾನು ಮೋಸ ಹೋಗಿರುವುದು ತಡವಾಗಿ ಅರಿವಿಗೆ ಬಂದ ಕೂಡಲೇ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ತಾಂತ್ರಿಕ ತನಿಖೆಯ ಆಧಾರದ ಮೇಲೆ ಆರೋಪಿ ತಮಿಳುನಾಡಿನಲ್ಲಿ ಅಡಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಅಲ್ಲಿಗೆ ತೆರಳಿ ಶೇಖರ್ನನ್ನು ಬಂಧಿಸಿ ಕರೆತಂದಿದ್ದಾರೆ. ಸದ್ಯ ಆರೋಪಿಯಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

