Home News ಬೆಂಗಳೂರು ಶಾಸಕ ಪತ್ರಿಕೆ ಸಂಪಾದಕ ಶಂಕರ್ ಪತ್ನಿಯ ಹಠಮಾರಿ ವ್ಯಕ್ತಿತ್ವಕ್ಕೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಉರಿದು ಸುಮ್ಮನಾಯಿತು ಇಡೀ...

ಶಾಸಕ ಪತ್ರಿಕೆ ಸಂಪಾದಕ ಶಂಕರ್ ಪತ್ನಿಯ ಹಠಮಾರಿ ವ್ಯಕ್ತಿತ್ವಕ್ಕೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಉರಿದು ಸುಮ್ಮನಾಯಿತು ಇಡೀ ಕುಟುಂಬ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ದಾಂಪತ್ಯದಲ್ಲಿ ತಾಳಮೇಳ ಇಲ್ಲ ಅಂದ್ರೆ ಏನಾಗುತ್ತೆ ಎಂಬುದಕ್ಕೆ ಶುಕ್ರವಾರ ಸಂಜೆ ಬೆಂಗಳೂರು ಉತ್ತರಿಸಿದೆ. ಹಣ ಅಂತಸ್ತು ವಿದ್ಯೆ ಎಲ್ಲೇ ಇದ್ದರೂ ವಿವೇಕವೊಂದು ಮಿಸ್ ಆಗಿದ್ದರೆ, ಬದುಕು ಹೇಗಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ತಿಗಳರಪಾಳ್ಯ ಈಗ ಮೂಕವಾಗಿ ಸಾಕ್ಷಿ ನುಡಿಯುತ್ತಿದೆ.

9 ತಿಂಗಳ ಮಗು ಸೇರಿದಂತೆ ಐವರ ಸಾವಿಗೆ ಕಾರಣವಾದ ಪ್ರಕರಣದ ಒಂದೊಂದೇ ಸತ್ಯಗಳು ಈಗ ಹೊರಕ್ಕೆ ಬರುತ್ತಿವೆ.
ಹಲ್ಲೆಗೆರೆ ಶಂಕರ್ ಕುಟುಂಬಕ್ಕೆ ಹಣ, ಆಸ್ತಿ, ಅಂತಸ್ತು ಎಲ್ಲವೂ ಬೇಕಾಗಿದ್ದಕ್ಕಿಂತ ಹೆಚ್ಚೇ ಇತ್ತು. ಆದರೆ ನೆಮ್ಮದಿ ಮಾತ್ರ ಮಿಸ್ ಹೊಡೆಯುತ್ತಿತ್ತು.


ಇವತ್ತು ಹಲ್ಲೆಗೆರೆ ಶಂಕರ್ ಪತ್ನಿಯ ಕೀಚಕಿ ವರ್ತನೆಗೆ ಇಡೀ ಸಂಸಾರವೇ ಸರ್ವನಾಶವಾಗಿ ಹೋಗಿದೆ. ಶಂಕರ್ ತಮ್ಮ ಮೂವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ರು. ಹೆಣ್ಣು ಮಕ್ಕಳಿಬ್ಬರನ್ನು ಐಎಎಸ್ ಕೋಚಿಂಗ್‍ಗೂ ಕಳುಹಿಸಿದ್ದರು. ಎಂಜಿನಿಯರ್ ಮಗನಿಗೆ ಬಾರ್ ಲೈಸೆನ್ಸ್ ಕೊಡಿಸಿದ್ರು. ಏನು ಕೊರತೆ ಆಗದಂತೆ ಶಂಕರ್ ನೋಡಿಕೊಂಡಿದ್ರು. ಆದರೂ ಪತ್ನಿ ಭಾರತಿ ಯಾರನ್ನೂ ನೆಮ್ಮದಿಯಾಗಿ ಇರಲು ಬಿಟ್ಟಿರಲಿಲ್ಲ. ಪರಿಣಾಮವೇ ಈ ಘನಘೋರ ದುರಂತ.
ಕಷ್ಟಪಟ್ಟು ದುಡಿದು ಮೂರು ಕೋಟಿ ಬೆಲೆಬಾಳುವ, ತೋಟ ಆಸ್ತಿಪಾಸ್ತಿ ಮಾಡಿದ್ದ ಶಂಕರ್ ಬಿಡಿಗಾಸಿಗೂ ಪತ್ನಿ ಮಕ್ಕಳಲ್ಲಿ ಕೈಚಾಚುವ ಹಂತಕ್ಕೆ ಬಂದಿದ್ದರು. ಅವರೇನು ತಾವು ದುಡಿದ ದುಡ್ಡನ್ನು ಖರ್ಚು ಮಾಡಿ ಹಾಳು ಮಾಡಿ ಈ ಸಭೆಗೆ ಬಂದಿರಲಿಲ್ಲ. ಪತ್ನಿ ಮಕ್ಕಳ ಹೆಸರಿನಲ್ಲಿ ಎಲ್ಲಾ ಆಸ್ತಿ ಬರೆದಿಟ್ಟು ಇನ್ನಾದರೂ ನೆಮ್ಮದಿ ಕುಟುಂಬದಲ್ಲಿ ಮೂಡುತ್ತಾ ಎಂದು ಕಾದು ಕೂತಿದ್ದರು ಶಾಸಕ ಪತ್ರಿಕೆಯ ಸಂಪಾದಕ ಶಂಕರ್.

ಆದರೆ ಆತನ ಪತ್ನಿ ಭಾರತಿ ಯಾರನ್ನು ನೆಮ್ಮದಿಯಾಗಿರಲು ಬಿಡಲಿಲ್ಲ. ಚುಚ್ಚುವುದು ಕಿರಿಕಿರಿ ಮಾಡುವುದು ಆಕೆಯ ಜನ್ಮಕ್ಕಂಟಿಕೊಂಡು ಬಂದಿತ್ತು. ತಮ್ಮ ಮನೆಯಲ್ಲಿ ನೆಮ್ಮದಿ ಕೆಡಿಸುವುದಲ್ಲದೆ, ಮುದ್ದಾದ ಇಬ್ಬರು ಹೆಣ್ಣುಮಕ್ಕಳ ದಾಂಪತ್ಯ ಜೀವನದ ಬಿರುಕು ಆಕೆ ಕಾರಣರಾಗಿದ್ದರು. ಹೆಣ್ಣುಮಕ್ಕಳನ್ನು ಪತಿ ಅಮ್ಮನಿಗೆ ಕಳಿಸಿಕೊಡಲು ಭಾರತಿ ನಿರಾಕರಿಸುತ್ತಿದ್ದರು ಸುಮ್ಮಸುಮ್ಮನೆ ಕ್ಯಾತೆ ತೆಗೆಯುತ್ತಿದ್ದರು. ಮಕ್ಕಳ ಸಾಂಸಾರಿಕ ಬಿರುಕು ಶಂಕರ್ ಅವರ ನೆಮ್ಮದಿ ಕದಡಿತ್ತು.

ಬ್ಯಾಡರಹಳ್ಳಿ ಠಾಣೆಗೆ ತಮ್ಮ ಕೌಟುಂಬಿಕ ಕಲಹದ ಬಗ್ಗೆ ಹಲ್ಲೆಗೆರೆ ಶಂಕರ್ ಏಳುಪುಟಗಳ ದೂರು ನೀಡಿದ್ದು, ಅದರಲ್ಲಿ ಎಲ್ಲವನ್ನು ಕೂಡ ಇಂಚಿಂಚಾಗಿ ವಿವರಿಸಿದ್ದಾರೆ. ನನ್ನ ಪತ್ನಿ ಭಾರತಿಯೇ ದುರಂತದ ಸೂತ್ರಧಾರಿ. ಆಸ್ತಿ, ಹಣ ಪತ್ನಿ, ಮಗನ ಹೆಸರಿನಲ್ಲಿತ್ತು. ಬೇಕಾದಾಗ ಕೇಳಿ ಪಡೆಯುತ್ತಿದ್ದೆ. ಇಬ್ಬರು ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸಲು ಭಾರತಿ ನಿಕಾರಿಸುತ್ತಿದ್ದು, ಗಲಾಟೆ ಮಾಡುತ್ತಿದ್ದಳು. ಒಮ್ಮೆ ಮಗಳನ್ನು ಬಚ್ಚಿಟ್ಟು ನನ್ನ ಬಳಿ ಪತ್ನಿ ನಾಟಕ, ಗಲಾಟೆ ಮಾಡಿದ್ದಳು.
ಮಕ್ಕಳ ಗಂಡನ ಮನೆಯವರನ್ನು ಅಂದರೆ ಬೀಗರನ್ನು ಹೆದರಿಸಲು ಕೈಕೊಯ್ದುಕೊಳ್ಳುವಂತೆ ಮಗಳಿಗೆ ಪ್ರೇರೇಪಿಸಿದ್ದಳು. ಹೆಣ್ಣುಮಕ್ಕಳ ಸಂಸಾರ ಸರಿ ಮಾಡಲು ನೋಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಳು. ಇಲ್ಲಸಲ್ಲದ ಮಾತನ್ನಾಡಿ ಮಗಳು ಸಿಂಧೂ ಪತಿಯನ್ನು ಮನೆಗೆ ಬರದಂತೆ ಮಾಡಿದ್ದಳು. ಅಲ್ಲದೆ ಸೆ.09ರಂದು ನಡೆಯಬೇಕಿದ್ದ ಸಿಂಧೂ ಮಗಳ ನಾಮಕರಣ ವಿಚಾರದಲ್ಲಿ ಗಲಾಟೆ ತೆಗೆದಿದ್ದರು.

ಕಿವಿ ಚುಚ್ಚುವ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಅದಾದ ಬಳಿಕ ಮಗನ ಹೆಸರಲ್ಲಿ ಬಾರ್ ಓಪನ್ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ, ಜಗಳವಾಗಿತ್ತು. ವೈರಾಗ್ಯದಿಂದ 10 ಲಕ್ಷಕ್ಕೆ ಬೇಡಿಕೆಯಿಟ್ಟು ಆಶ್ರಮ ಕಟ್ಟಿ ಅಲ್ಲಿ ಸೇರಲು ನಾನು ನಿರ್ಧಾರ ಮಾಡಿದ್ದೆ. ಆಗ ಹಣ ಕೊಡಲ್ಲ ಎಂದು ಪತ್ನಿ ಹಾಗೂ ಮಗ ಗಲಾಟೆ ಮಾಡಿದ್ದರು.
ಇದರಿಂದ ಬೇಸರಗೊಂಡು ಭಾನುವಾರ ಮನೆಬಿಟ್ಟಿದ್ದೆ. ಅದೇ ದಿನ ಸಂಜೆ ಹಣ ಕೊಡ್ತೀನಿ ಬನ್ನಿ ಎಂದು ಮಗ ವಾಟ್ಸಪ್ ಸಂದೇಶ ಕಳುಹಿಸಿದ್ದನು. ಆದರೆ ನಾನು ಅದಕ್ಕೆ ಸ್ಪಂದಿಸಿಲ್ಲ. ಮೊನ್ನೆ ಮನೆ ಬಳಿ ಬಂದಿದ್ದಾಗ ಬೀಗ ಹಾಕಿದ್ದು ನೋಡಿ ಗೆಳೆಯನ ಮನೆಯಲ್ಲಿ ಉಳಿದಿದ್ದೆ. ನಿನ್ನೆ ಸಂಜೆ ಅನುಮಾನ ಬಂದು ಮನೆ ಬಳಿ ಬಂದು ಪರಿಶೀಲನೆ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಶಂಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಭಾನುವಾರ ಜಗಳ ನಡೆದಿದ್ದು, ಸೋಮವಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಒಬ್ಬೊಬ್ಬರು ಒಂದೊಂದು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. 9 ತಿಂಗಳ ಕಂದಮ್ಮ ಹಸಿವಿನಿಂದ ಸಾವನ್ನಪ್ಪಿದೆ. ತಾಯಿ, ಅಕ್ಕಂದಿರು ಹಾಗೂ 9 ತಿಂಗಳ ಮಗುವಿನ ಶವದ ಮಧ್ಯೆ ಎರಡು ದಿನವಿದ್ದ ಮಧುಸಾಗರ್, ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ.

ಮಧುಸಾಗರ್ ನೇಣಿಗೆ ಶರಣಾಗುವ ಮುನ್ನ, ಬದುಕುಳಿದ ಎರಡೂವರೆ ವರ್ಷದ ಪ್ರೇಕ್ಷಾಗೆ ಬೇಕಾದ ಆಹಾರ, ಬಿಸ್ಕೆಟ್‍ಗಳನ್ನು ಪಕ್ಕದಲ್ಲೇ ಇಟ್ಟು ತನ್ನ ಬದುಕಿನ ಕೊನೆಯ ಕ್ಷಣದಲ್ಲಿ ಒಂದಷ್ಟು ವಿವೇಕ ತೋರಿಸಿದ್ದ. ಸಾಮೂಹಿಕ ಆತ್ಮಹತ್ಯೆ ಪೂರ್ವನಿಯೋಜಿತ ಎನ್ನಲಾಗುತ್ತಿದೆ. ನಿನ್ನೆ ಸಂಜೆ ಶಂಕರ್ ಪೊಲೀಸರ ನೆರವಿನಿಂದ ಬಾಗಿಲು ಒಡೆದು ಮನೆ ಒಳಗೆ ಹೋದಾಗ, ಅಲ್ಲಿನ ಪರಿಸ್ಥಿತಿಯನ್ನು ನೋಡಿ ಶಾಕ್ ಆಗಿದ್ದರು. ಎಲ್ಲರೂ ಸತ್ತು ಹೋಗಿದ್ದಾರೆ ಎಂದು ಭಾವಿಸಿದ್ರು. ಆದರೆ ಪೊಲೀಸರು ಪ್ರೇಕ್ಷಾ ಉಸಿರಾಡ್ತಿರೋದನ್ನು ಗಮನಿಸಿದ್ರು. ಕೂಡಲೇ ಮೊಮ್ಮಗಳನ್ನು ಎತ್ತಿಕೊಂಡು ಹೊರಗೆ ಓಡಿದ ಶಂಕರ್, ಯಾರಾದ್ರೂ ನೀರು ಕೊಡಿ ಎಂದು ಗೊಳಾಡಿ ಕೂಗಿಕೊಂಡಿದ್ರು.

ಅತ್ತ ಸಿಂಧೂರಾಣಿ ಪತಿ ಶ್ರೀಕಾಂತ್, ತಮ್ಮ ಮಗಳನ್ನು ನೋಡಲು ಹಾತೊರೆಯುತ್ತಿದ್ರು. ಗಂಡ-ಹೆಂಡ್ತಿ ನಡುವೆ ಗಲಾಟೆ ಇದ್ರೂ ವೀಡಿಯೋ ಕಾಲ್ ಮೂಲಕ ಮಗಳನ್ನು ಗಂಡನಿಗೆ ಸಿಂಧೂರಾಣಿ ತೋರಿಸ್ತಿದ್ರು. ಆದರೆ ಸೋಮವಾರದಿಂದ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಅಂದು ಸಂಜೆ ಮನೆ ಬಳಿ ಬಂದಿದ್ರು. ಮನೆ ಬಾಗಿಲು ಹಾಕಿದ್ದು ನೋಡಿ ವಾಪಸ್ಸಾಗಿದ್ರು ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆದು, ಸಂಜೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಸಾಮೂಹಿಕ ಆತ್ಮಹತ್ಯೆಗೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಹಲ್ಲೆಗೆರೆ ಶಂಕರ್ ಮತ್ತು ಇಬ್ಬರು ಅಳಿಯಂದಿರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಡೆತ್ ನೋಟ್ ಏನಾದ್ರೂ ಇದ್ಯಾ ಎಂದು ಪೊಲೀಸರು ಮನೆಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಮಧುಸಾಗರ್ ಡೈರಿ ಸಿಕ್ಕಿದ್ದು, ಅದ್ರಲ್ಲಿ ತಂದೆಯ ಬಗ್ಗೆ ಇರುವ ಮಾಹಿತಿ ಪರಿಶೀಲಿಸಿದ್ದಾರೆ. ಮನೆಯ ಒಳಗಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಶಂಕರ್ ಮನೆಯ ಕೆಲಸದಾಕೆ ಭಾನುವಾರದಿಂದ ಮನೆ ಕಡೆ ಸುಳಿದಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನೆಯವರು ಮನೆ ಕೆಲಸದ ಹುಡುಗಿಗೆ ಇನ್ನೊಂದು ವಾರ ಮನೆಕಡೆ ಬರದಂತೆ ರಜ ಕೊಟ್ಟಿರುವ ಸಂಭವವಿದೆ. ಒಟ್ಟಾರೆಯಾಗಿ ವಿವೇಕರಹಿತ ಪರಪೀಡನಾ ಚತುರ ಹೆಣ್ಣಿನ ಹಟಕ್ಕೆ ಒಂದಿಡೀ ಕುಟುಂಬ ಸುಮ್ಮನಹಳ್ಳಿ ಚಿತಾಗಾರದಲ್ಲಿ ಉರಿದು ಸುಮ್ಮನಾಗಿದೆ.