Home » ಕೊರೊನಾ ಮಾಸ್ಕ್‌ ಹಾಕಿಲ್ಲವೆಂದು ಪ್ರಕರಣ: ಡಾ.ಕಕ್ಕಿಲ್ಲಾಯರ ವಿರುದ್ಧದ ಪ್ರಕರಣ ರದ್ದು ಮಾಡಿದ ಹೈಕೋರ್ಟ್‌

ಕೊರೊನಾ ಮಾಸ್ಕ್‌ ಹಾಕಿಲ್ಲವೆಂದು ಪ್ರಕರಣ: ಡಾ.ಕಕ್ಕಿಲ್ಲಾಯರ ವಿರುದ್ಧದ ಪ್ರಕರಣ ರದ್ದು ಮಾಡಿದ ಹೈಕೋರ್ಟ್‌

0 comments

ಮಂಗಳೂರು, ಜೂ.21: ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್‌ ಹಾಕದೆ ಮಳಿಗೆಯೊಂದಕ್ಕೆ ಪ್ರವೇಶ ಮಾಡಿದ ಆರೋಪದಲ್ಲಿ ನಗರದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ದಾಖಲು ಮಾಡಿದ್ದ ಪ್ರಕರಣ ಮತ್ತು ಅದರ ಕುರಿತು ಕೋರ್ಟಿಗೆ ಸಲ್ಲಿಸಲಾಗಿದ್ದ ಆರೋಪ ಪಟ್ಟಿಗಳನ್ನು ರದ್ದು ಮಾಡಿ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

2021ರ ಮೇ 18 ರಂದು ನಗರದ ಮಳಿಗೆಯೊಂದಕ್ಕೆ ಡಾ.ಶ್ರೀನಿವಾಸ ಕಕ್ಕಿಲ್ಲಾಯರು ಭೇಟಿ ನೀಡಿದ್ದು ಈ ವೇಳೆ ಮಾಸ್ಕ್‌ ಹಾಕಿಲ್ಲ ಎಂದು ಆರೋಪಿಸಿ ಸ್ಥಳದಲ್ಲಿ ಮಾತುಕತೆ ಆಗಿತ್ತು. ಪೊಲೀಸರು ಮಾಸ್ಕ್‌ ಧರಿಸಲೇಬೇಕೆಂದು ವಾದ ಮಾಡಿದ್ದು ಅವರ ವಿರುದ್ಧ ಮಂಗಳೂರು ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ಮಂಗಳೂರಿನ ಆರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆದಿತ್ತು. ನಂತರ ಈ ಪ್ರಕರಣ ಹೈಕೋರ್ಟಿಗೆ ವರ್ಗಾವಣೆಗೊಂಡಿತ್ತು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯವು ಇದೀಗ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಗಳನ್ನೇ ರದ್ದು ಮಾಡಿ ಆದೇಶ ನೀಡಿದೆ.

ರೂ.200 ದಂಡ ವಿಧಿಸಬಹುದಾದ ಈ ಪ್ರಕರಣವನ್ನು ನ್ಯಾಯಾಂಗದ ವಿಚಾರಣೆಗೊಳಪಡಿಸಲು ಅಥವಾ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶಳು ಇಲ್ಲ. ಅಲ್ಲದೇ, ಸಾಂಕ್ರಾಮಿಕ ರೋಗಗಳ ಕಾಯಿದೆಯಡಿಯಲ್ಲಿ ಕೊರೋನಾ ಸಾಂಕ್ರಾಮಿಕದ ಪ್ರಕಟಣೆಯನ್ನೇ ಮಾಡಿಯೇ ಇಲ್ಲ. ಹೀಗಾಗಿ ಈ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎನ್ನುವ ಅರ್ಜಿದಾರರ ವಾದವನ್ನು ಉಚ್ಛ ನ್ಯಾಯಾಲಯವು ಪುರಸ್ಕರಿಸಿದೆ.

ತನ್ನ ವಿರುದ್ಧ ಉತ್ಪ್ರೇಕ್ಷಿತ ಹೇಳಿಕೆಗಳನ್ನು ವೈಯಕ್ತಿಕ ನಿಂದನೆಗಳನ್ನೂ ಮಾಡಿ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ತೇಜೋವಧೆಗೂ ಘಟನೆ ಸಂದರ್ಭ ಪ್ರಯತ್ನ ಮಾಡಲಾಗಿತ್ತು. ಅದಕ್ಕಾಗಿ ಸೂಪರ್‌ ಮಾರ್ಕೆಟ್‌ ಮಾಲಕರ ವಿರುದ್ಧ, ಮಂಗಳೂರಿನ ಐಎಂಎ ಮತ್ತು ಎಎಂಸಿ ಎಂಬ ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ಡಾ.ಶ್ರೀನಿವಾಸ ಕಕ್ಕಿಲ್ಲಾಯರು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲು ಮಾಡಿದ್ದು, ಅದರ ವಿಚಾರಣೆ ಮುಂದುವರಿದಿದೆ.

banner

You may also like