Home » ಹೆಂಡತಿ ಓಡಿಹೋಗಲು ಸಹಾಯ ಮಾಡಿದಕ್ಕೆ ಗೆಳೆಯನ ಹತ್ಯೆ – 72 ಗಂಟೆಗಳಲ್ಲಿ ಪ್ರಕರಣ ಭೇಧಿಸಿ ಇಬ್ಬರು ಆರೋಪಿಗಳ ಬಂಧಿಸಿದ ಪಣಂಬೂರು ಪೊಲೀಸ್!!

ಹೆಂಡತಿ ಓಡಿಹೋಗಲು ಸಹಾಯ ಮಾಡಿದಕ್ಕೆ ಗೆಳೆಯನ ಹತ್ಯೆ – 72 ಗಂಟೆಗಳಲ್ಲಿ ಪ್ರಕರಣ ಭೇಧಿಸಿ ಇಬ್ಬರು ಆರೋಪಿಗಳ ಬಂಧಿಸಿದ ಪಣಂಬೂರು ಪೊಲೀಸ್!!

0 comments

ಹೆಂಡತಿ ಓಡಿ ಹೋಗಲು ಸಹಾಯ ಮಾಡಿದ್ದಾನೆ ಎಂದು ವ್ಯಕ್ತಿ ಒಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಎಂಎಸ್‌ಇಜೆಡ್ (MSEZ) ತೋಡಿನಲ್ಲಿ ಜೂನ್ 10ರಂದು ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಪಣಂಬೂರು ಪೊಲೀಸರು ಕೇವಲ 72 ಗಂಟೆಗಳಲ್ಲಿ ಭೇದಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಬಂಧಿತರನ್ನು ಬಿಹಾರ ರಾಜ್ಯದ ದರ್ಬಾಂಗಾ ಮೂಲದ, ಸದ್ಯ ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಬಳಿ ವಾಸವಿದ್ದ ಪ್ರಶಾಂತ್ ಕುಮಾರ್ (36) ಮತ್ತು ಆತನಿಗೆ ಸಹಕರಿಸಿದ ವೈಶಾಲಿ ಜಿಲ್ಲೆಯ ಪಿಂಕೂ ಮಹ್ತೋ (33) ಎಂದು ಗುರುತಿಸಲಾಗಿದೆ. ಇನ್ನು ಕೊಲೆಯಾದ ವ್ಯಕ್ತಿ ಬಿಹಾರದ ಪೂರ್ನಿಯಾ ಜಿಲ್ಲೆಯ ಚಂದನ್ ಚೌಹಾನ್ (39) ಎಂದು ತನಿಖೆ ವೇಳೆ ದೃಢಪಟ್ಟಿದೆ.

ಏನಿದು ಘಟನೆ?

ಪ್ರಶಾಂತ್ ಕುಮಾರ್ ಎಂಆರ್‌ಪಿಎಲ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸದ್ಯ ಅಪಘಾತಕ್ಕೀಡಾಗಿ ಮನೆಯಲ್ಲಿದ್ದ. ಈತನ ಪತ್ನಿಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ಮತ್ತೊಬ್ಬ ಯುವಕನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಳು. ಆಕೆ ಮನೆ ಬಿಟ್ಟು ಹೋಗಲು ಮೃತ ಚಂದನ್ ಚೌಹಾನ್ ಸಹಾಯ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಪತ್ನಿ ಓಡಿ ಹೋದ ಸುದ್ದಿಯನ್ನು ಎಲ್ಲೆಡೆ ಪ್ರಚಾರ ಮಾಡಿದ್ದ. 

banner

ಇದರಿಂದ ತೀವ್ರವಾಗಿ ಸಿಟ್ಟಿಗೆದ್ದಿದ್ದ ಪ್ರಶಾಂತ್, ಜೂನ್ 9ರಂದು ಸಂಜೆ 6 ಗಂಟೆಯ ಸುಮಾರಿಗೆ ಪ್ರಶಾಂತ್ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿ ಚಂದನ್ ಚೌಹಾನ್‌ನನ್ನು ತಡೆದು ತಲೆ ಹಾಗೂ ಮುಖಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆಯನ್ನು ಸೀಳಿ ಭೀಕರವಾಗಿ ಕೊಲೆ ಮಾಡಿ, ಮೃತದೇಹವನ್ನು ಜೋಕಟ್ಟೆಯ ಬಾಡಿಗೆ ಮನೆಯ ಪಕ್ಕದಲ್ಲಿದ್ದ ಎಂಎಸ್‌ಇಜೆಡ್ ತೋಡಿನಲ್ಲಿ ಬಿಸಾಡಿ ಪರಾರಿಯಾಗಿದ್ದರು.

 ಮರುದಿನ ಬೆಳಗ್ಗೆ ಶವ ಪತ್ತೆಯಾಗಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಜೂನ್ 13ರ ತಡರಾತ್ರಿ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್‌ನನ್ನು ಜಾಲ ಬೀಸಿ ಹಿಡಿದಿದ್ದಾರೆ. ಮತ್ತೊಬ್ಬ ಆರೋಪಿ ಪಿಂಕೂ ಮಹ್ತೋನನ್ನು ಜೋಕಟ್ಟೆಯಲ್ಲೇ ಬಂಧಿಸಲಾಗಿದೆ. ಅತಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like