ಬರೋಬ್ಬರಿ 26 ವರ್ಷಗಳ ಹಿಂದೆ, ಅಂದರೆ 2000ನೇ ಇಸವಿಯಲ್ಲಿ ಕೇವಲ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ಹೋಗಿದ್ದ ಮಗ ಬರೋಬ್ಬರಿ 26 ವರ್ಷದ ಬಳಿಕ ತಾಯಿಯ ಮಡಿಲು ಸೇರಿದ್ದಾನೆ.


ಧರ್ಮಸ್ಥಳದ ಅಶೋಕನಗರ ನಿವಾಸಿ ಸತೀಶ್ (ಪ್ರಸ್ತುತ ಸಲೀಂ ಅಬ್ದುಲ್ ಅನ್ಸಾರಿ) ಮರಳಿ ಬಂದ ಮಗ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಆಕರ್ಷಣೆಗೆ ಒಳಗಾಗಿದ್ದ 12 ವರ್ಷದ ಪುಟ್ಟ ಬಾಲಕ ಸತೀಶ್, ಸರ್ಕಸ್ ಕಂಪನಿ ಊರು ಬಿಡುವಾಗ ಅವರೊಂದಿಗೇ ಹೊರಟುಹೋಗಿದ್ದ. ಈಗ ಬರೋಬ್ಬರಿ 26 ವರ್ಷಗಳ ಬಳಿಕ ಈಗ ಮುಸ್ಲಿಂ ಧರ್ಮ ಸ್ವೀಕರಿಸಿ, ವಿವಾಹವಾಗಿ ಇಬ್ಬರು ಮಕ್ಕಳ ತಂದೆಯಾದ ಬಳಿಕ ಪವಾಡ ಸದೃಶ ರೀತಿಯಲ್ಲಿ ಮರಳಿ ತಾಯಿಯ ಮಡಿಲು ಸೇರಿರುವ ಅಪರೂಪದ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಅಂದು ಸರ್ಕಸ್ ತಂಡದ ಜೊತೆ ಊರು ಬಿಟ್ಟ ಅಂದಿನ ಸತೀಶ್ ಮಹಾರಾಷ್ಟ್ರ ಸೇರಿದ ಆತ, ಕಳೆದ 26 ವರ್ಷಗಳಿಂದ ಅಲ್ಲಿಯೇ ವಿವಿಧ ಕೆಲಸಗಳನ್ನು ಮಾಡಿಕೊಂಡಿದ್ದ. ದೀರ್ಘಕಾಲದಿಂದಾಗಿ ಆತ ತನ್ನ ಹೆತ್ತವರು, ಸ್ವಂತ ಊರು ಹಾಗೂ ಮಾತೃಭಾಷೆಯಾದ ಕನ್ನಡ ಮತ್ತು ತುಳುವನ್ನು ಸಂಪೂರ್ಣವಾಗಿ ಮರೆತುಹೋಗಿದ್ದ.ಇತ್ತೀಚೆಗೆ ಸತೀಶ್ ಮಹಾರಾಷ್ಟ್ರದ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಆತ ಅಂದು ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಹೋದಾಗ ಹಳೆಯ ನೆನಪುಗಳು ಇದ್ದಕ್ಕಿದ್ದಂತೆ ಮರುಕಳಿಸಿವೆ.
“ಇದೇ ನನ್ನ ಸ್ವಂತ ಊರು” ಎಂದು ಖಾತ್ರಿಯಾದ ತಕ್ಷಣ, ಆತನಿಗೆ ತನ್ನ ತಮ್ಮಂದಿರ ಹೆಸರುಗಳು ನೆನಪಿಗೆ ಬಂದಿವೆ. ತಕ್ಷಣವೇ ಸ್ಥಳೀಯ ಅಂಗಡಿಯವರನ್ನು ಹಾಗೂ ಸಾರ್ವಜನಿಕರನ್ನು ವಿಚಾರಿಸಿ, ಅರಸುತ್ತಾ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾನೆ. ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ತಾಯಿ, ಉಳಿದ ಮಕ್ಕಳ ಬಳಿ “ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆ ನೋಡಬೇಕು, ಅವನನ್ನು ಕರೆತನ್ನಿ” ಎಂದು ಕಣ್ಣೀರಿಟ್ಟಿದ್ದರು. ಹೆತ್ತ ಕರುಳಿನ ಆ ಕ್ರಂದನಕ್ಕೆ ಕೊನೆಗೂ ಭಗವಂತ ಉತ್ತರಿಸಿದ್ದಾನೆ.
ಮನೆ ಬಿಟ್ಟು ಹೋಗುವಾಗ ಸತೀಶ್ ಆಗಿದ್ದ ಈತ, ಮಹಾರಾಷ್ಟ್ರದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದಾನೆ. ಅಲ್ಲಿಯೇ ತಾಲೀಮಾ ಎಂಬಾಕೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಕನ್ನಡ, ತುಳು ಮರೆತು ಸಂಪೂರ್ಣ ಹಿಂದಿ ಭಾಷೆಯಲ್ಲೇ ಮಾತನಾಡುವ ಸಲೀಂ, ಹೆಂಡತಿ ಮತ್ತು ಮಕ್ಕಳೊಂದಿಗೆ ಹೆತ್ತ ತಾಯಿಯ ನಿವಾಸದಲ್ಲಿದ್ದು, ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಮಗ ನಾಪತ್ತೆಯಾದ ದಿನದಿಂದಲೂ ತಾಯಿ ಮಗನಿಗಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ಕಲ್ಲುರ್ಟಿ ದೈವಸ್ಥಾನಕ್ಕೆ ನಿರಂತರವಾಗಿ ಹರಕೆಗಳನ್ನು ಹೊತ್ತು ಕಣ್ಣೀರಿಡುತ್ತಿದ್ದರು. ಇದೀಗ ಆ ಎಲ್ಲಾ ದೇವರುಗಳು ಅವರಿಗೆ ಕರುಣೆ ತೋರಿದೆ.

