ಜೂನ್ 5 ರ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜೆಸಿಐ ಇಂಡಿಯಾದ ವಲಯ 15ರ ಗೋ -ಗ್ರೀನ್ ಕಾರ್ಯಕ್ರಮವನ್ನು ಜೆಸಿಐ ಉಜಿರೆ ಸಿಟಿ ಮತ್ತು ಮಹಿಳಾ ಜೆ ಸಿ ವಿಭಾಗದ ವತಿಯಿಂದ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ ಇಲ್ಲಿ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಜಿರೆ ಘಟಕದ ಅಧ್ಯಕ್ಷ ಮೊಹಮ್ಮದ್ ಮಿರ್ಷಾದ್ ರವರು ವಹಿಸಿದ್ದರು.


ಜಾಗೃತಿ ಕಾರ್ಯಕ್ರಮ
ಮಹಿಳಾ ಜೇಸಿ ವಿಭಾಗದ ಸಂಯೋಜಕಿ, ವಲಯ ತರಬೇತುದಾರರಾದ ಹೇಮಾವತಿ ಕೆ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತು ಹಸಿರಿನ ಪರಿಸರವನ್ನು ಉಳಿಸುವಲ್ಲಿ ಯುವ ಸಮುದಾಯದ ಜವಾಬ್ದಾರಿಯ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಗಿಡ ವಿತರಣೆ
ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಇದರ ವ್ಯವಸ್ಥಾಪಕರಾದ ಲೋಹಿತ್ ಕುಮಾರ್ ಹಾಗೂ ಜೆಸಿಐ ಘಟಕ ಅಧ್ಯಕ್ಷ ಮೊಹಮ್ಮದ್ ಮಿರ್ಷಾದ್ ರವರು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಮಂಜುಳಾ ರವರು ಜೆಸಿಐ ಘಟಕ ಮತ್ತು ಮುಳಿಯ ಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು. ಜಂಟಿ ಸಂಸ್ಥೆಗಳ ವತಿಯಿಂದ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಬಳಿಕ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು. ಜೆಸಿಐ ಘಟಕದ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ ಧನ್ಯವಾದವಿತ್ತರು.ಜೇಸಿ ಸುಮಿತ್ರಾ ರವರು ಎಲ್ಲರನ್ನು ವೇದಿಕೆಗೆ ಆಹ್ವಾನಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕವೃಂದ ಜೆಸಿ ಸದಸ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಗಿಡ ನೆಡುವ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಘಟಕದ ಅಧ್ಯಕ್ಷರು ಶಾಲೆಗೆ ಅಡಿಕೆ ಸಸಿಗಳನ್ನು ವಿತರಿಸಿದರು.

