ನಾಡಿನ ಐತಿಹಾಸಿಕ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿದ್ದು, ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ವಿರುದ್ಧವೇ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರುದೇವಸ್ಥಾನದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಕಳ್ಳತನವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಹಿಂದೆ ಪ್ರಸಿದ್ಧ ವಜ್ರಾಂಗಿ ಆಭರಣ ಕಳ್ಳತನ ನಡೆದಿತ್ತು. ಈ ಬಳಿಕ, ಇಷ್ಟೊಂದು ದೊಡ್ಡ ಪ್ರಮಾಣದ ಕಳ್ಳತನದ ಶಂಕೆ ವ್ಯಕ್ತವಾಗಿರುವುದು ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಳ್ಳತನ ಬಯಲಾಗಿದ್ದು ಹೇಗೆ?
ದೇವಾಲಯದಲ್ಲಿ ಕಿಡಿಗೇಡಿಗಳು ಪದೇ ಪದೇ ಸಿಸಿ ಕ್ಯಾಮೆರಾಗಳನ್ನ ಕೆಡಿಸುತ್ತಿದ್ದರು. ಹೀಗಾಗಿ ಆಡಳಿತ ಮಂಡಳಿಯು ಅತ್ಯಂತ ಗೌಪ್ಯವಾಗಿ ರಹಸ್ಯ ಸಿಸಿ ಕ್ಯಾಮೆರಾಗಳನ್ನ ಅಳವಡಿಸಿತ್ತು. ಈ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿರುವ ವಿಚಾರ ಕೇವಲ ದೇವಾಲಯದ ಆಡಳಿತ ಸಿಬ್ಬಂದಿಗೆ ಮಾತ್ರ ತಿಳಿದಿತ್ತು. ಆದರೆ, 2026 ರ ಜನವರಿ 12 ರಂದು ಈ ರಹಸ್ಯ ಸಿಸಿ ಕ್ಯಾಮೆರಾವನ್ನು ಸಹ ಕಿಡಿಗೇಡಿಗಳು ಕೆಡಿಸಿದ್ದಾರೆ. ಆಗ ಕಳ್ಳತನದ ಉದ್ದೇಶದಿಂದಲೇ ದೇವಸ್ಥಾನದ ಒಳಗಿನ ಸಿಬ್ಬಂದಿ ಹಾಗೂ ಅರ್ಚಕರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಬಯಲಾಗಿದೆ.
ದೇವಸ್ಥಾನದ ಇಒ ಶೀಲಾ ಅವರ ದೂರಿನನ್ವಯ ಪೊಲೀಸರು ಒಟ್ಟು 5 ಮಂದಿ ಪ್ರಮುಖರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಶ್ರೀಧರ್ (ಪಾರುಪತ್ತೆಗಾರ), ನಾರಾಯಣ ಭಟ್ಟ (ಅರ್ಚಕ), ತಿರುವೆಂಗಡಚಾರ್ (ಪರಿಚಾರಕ), ಗಂಗಾಧರ್ ಮತ್ತು ಬಸವರಾಜ್ (ಕಾವಲುಗಾರರು) ವಿರುದ್ಧ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ.

