ಮಧ್ಯಪ್ರಾಚ್ಯ ದೇಶಗಳ ಮಾದರಿಯಲ್ಲಿ ಭಾರತದಲ್ಲೂ ತಪ್ಪಿತಸ್ತರಿಗೆ ಕೈ-ಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೈಕೋರ್ಟ್ (High court ) ನ್ಯಾಯಮೂರ್ತಿ ಆರ್. ನಟರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ಇತ್ತೀಚೆಗೆ ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ಅವರು, ಅತ್ಯಾಚಾರ ಆರೋಪದಡಿ ಬಂಧಿತರಾಗಿ ರುವ ತೆಲಂಗಾಣದ ತರುಣರೊಬ್ಬರು (23) ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ವೇಳೆ ಈ ಮಾತುಗಳನ್ನಾಡಿದ್ದಾರೆ
ನಾವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಅಪರಾಧ ಎಸಗುವುದು ಸುಲಭ ಎನ್ನುವಂತಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನೀಡುವ ಕಠಿಣ ಶಿಕ್ಷೆಯನ್ನು ನಮ್ಮಲ್ಲೂ ತಪ್ಪಿತಸ್ಥರಿಗೆ ನೀಡುವಂತಾದರೆ, ಜನರು ತಕ್ಕ ರೀತಿಯಲ್ಲಿ ಕಾನೂನು ಪಾಲಿಸುತ್ತಾರೆಂದು ನುಡಿದಿದ್ದಾರೆ
ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಮೂರ್ತಿಗಳು, “ಅರ್ಜಿದಾರ ನಾಲ್ಕೈದು ದಿನ ಜೈಲಿನಲ್ಲಿರಲಿ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ಜೈಲಿನ ಅನುಭವವಾಗಲಿ” ಎಂದು ಮಾರ್ಮಿಕವಾಗಿ ನುಡಿದು, ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದ್ದಾರೆ.
ಪ್ರಕರಣವೇನು?
ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ತರುಣಿ (23), ‘ಆರೋಪಿ ಮತ್ತು ನಾನು ಕರ್ನಾಟಕದಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದೆವು. 2023ರ ಜುಲೈನಲ್ಲಿ ಆತ ನನಗೆ ಪ್ರೇಮ ನಿವೇದನೆ ಮಾಡಿದ್ದ. ಅದಕ್ಕೆ ನಾನು ಸ್ಪಂದಿಸಿದ್ದೆ. ನಂತರದಲ್ಲಿ ಅವನ ನಡವಳಿಕೆ ಇಷ್ಟವಾಗದ ಕಾರಣ ಅಂತರ ಕಾಯ್ದುಕೊಂಡಿದ್ದೆ. 2023ರ ಸೆಪ್ಟೆಂಬರ್ 12ರಂದು ಆತ ನನ್ನನ್ನು ಪುಸಲಾಯಿಸಿ ನಮ್ಮ ಸಂಬಂಧದ ಬಗ್ಗೆ ಚರ್ಚಿಸಲು ತಾನಿದ್ದ ಅಪಾರ್ಟ್ಮೆಂಟ್ಗೆ ಕರೆಯಿಸಿಕೊಂಡಿದ್ದ. ಈ ವೇಳೆ ಆತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದೇನೆ’ ಎಂದು ದೂರಿನಲ್ಲಿ ವಿವರಿಸಿದ್ದರು. ಇದರ ಆಧಾರದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ದಾಖಲಿಸಿ ಬಂಧಿಸಿದ್ದರು.

