Home » ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

0 comments

ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆಯಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯತೀಶ (33) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯತೀಶ ಅವರ ಸಹೋದರ ನಿತಿನ್ ಅವರಿಗೆ ಜೂನ್ 1 ರ ಮುಂಜಾನೆ ವಾಟ್ಸಾಪ್ ಮೂಲಕ ಅಪರಿಚಿತ ಮೃತದೇಹದ ಭಾವಚಿತ್ರವೊಂದು ಬಂದಿತ್ತು. ಫೋಟೋ ಪರಿಶೀಲಿಸಿದಾಗ ಅದು ತಮ್ಮ ಸಹೋದರ ಯತೀಶ ಎಂದು ತಿಳಿದುಬಂದಿದೆ.

ತಕ್ಷಣ ನಿತಿನ್ ಅವರು ಘಟನಾ ಸ್ಥಳಕ್ಕೆ ಧಾವಿಸಿ, ಅಲ್ಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ದೃಶ್ಯಾವಳಿಗಳಲ್ಲಿ ಮೂವರು ವ್ಯಕ್ತಿಗಳು ಸೇರಿ ಯತೀಶ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸುತ್ತಿರುವುದು ಪತ್ತೆಯಾಗಿದೆ. ಆರೋಪಿಗಳ ಭೀಕರ ಹಲ್ಲೆಯಿಂದಾಗಿಯೇ ಯತೀಶ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಯಶೋಧರ ಮಿತ್ತಬಾಗಿಲು, ಬೆಳ್ತಂಗಡಿ, ಮೋಹನ್ ಚಾರ್ವಾಕ, ಕಡಬ ಮತ್ತು ಇಬ್ರಾಹಿಂ ಪಡಂಗಡಿ ಬಂಧಿತರು. ಮೃತರ ಸಹೋದರ ನಿತಿನ್ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 65/2026 ರಂತೆ, ಬಿ.ಎನ್.ಎಸ್ (BNS) ಕಾಯ್ದೆಯ ಕಲಂ 115(2), 103 ಹಾಗೂ 3(5) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

banner

You may also like