ದೇಶದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಮಾಜಿ ‘ಮಿಸ್ ಪುಣೆ’ ಟ್ವಿಶಾ ಶರ್ಮಾ (Twisha Sharma) ಅವರು ಮದುವೆಯಾದ ಕೇವಲ 5 ತಿಂಗಳು ಕಳೆಯುವಷ್ಟರಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಸಾವು ಇಡೀ ದೇಶವನ್ನು ಆಘಾತಕ್ಕೀಡು ಮಾಡಿದೆ.


ಹೌದು, 2012ರಲ್ಲಿ ‘ಮಿಸ್ ಪುಣೆ’ ಕಿರೀಟ ಮುಡಿಗೇರಿಸಿಕೊಂಡಿದ್ದ ಟ್ವಿಶಾ ಶರ್ಮಾ, ನೋಯ್ಡಾದಲ್ಲಿ ಕಾರ್ಪೊರೇಟ್ ವೃತ್ತಿಜೀವನ ನಡೆಸುತ್ತಿದ್ದರು. ಕಳೆದ ಐದು ತಿಂಗಳ ಹಿಂದೆಯಷ್ಟೇ ಅವರು ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಳೆದ ಮಂಗಳವಾರ (ಮೇ 12) ರಾತ್ರಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬರ ಸಿಡಿಲಿನಂತೆ ಬಂದೆರಗಿದೆ.
ಟ್ವಿಶಾ ಎಂಬಿಎ ಪದವೀಧರೆಯಾಗಿದ್ದು, ಮದುವೆಯ ನಂತರ ಸಂಸಾರಕ್ಕಾಗಿ ಕೆಲಸ ಬಿಟ್ಟು ಭೋಪಾಲ್ಗೆ ಬಂದಿದ್ದರು. ಟ್ವಿಷಾ ಅವರ ಅತ್ತೆ ಕೋರ್ಟಿನ ನಿವೃತ್ತ ಜಡ್ಜ್ ಆಗಿದ್ದು ಪತಿ ವಕೀಲರಾಗಿದ್ದಾರೆ. ಆದರೆ ಪತಿ ಮತ್ತು ಅತ್ತೆ ಕಡೆಯಿಂದ ಮತ್ತೆ ಕೆಲಸಕ್ಕೆ ಸೇರುವಂತೆ ನಿರಂತರ ಒತ್ತಡ ಇತ್ತೆಂದು ಹೇಳಲಾಗಿದೆ. ಇದರ ಜೊತೆಗೆ, ಟ್ವಿಶಾ ಅನಿರೀಕ್ಷಿತವಾಗಿ ಗರ್ಭಿಣಿಯಾಗಿದ್ದರು. ಆದರೆ ಅವರು ಆ ಹಂತದಲ್ಲಿ ತಾಯಿಯಾಗಲು ಮಾನಸಿಕವಾಗಿ ಸಿದ್ಧರಿರಲಿಲ್ಲ. ಇದೇ ವಿಷಯವಾಗಿ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು ಮತ್ತು ಇದು ಅವರ ಸಾವಿಗೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.
“ನಾನು ಇಲ್ಲಿ ಕೆಟ್ಟದಾಗಿ ಸಿಲುಕಿಕೊಂಡಿದ್ದೇನೆ ಬ್ರೋ. ಆದರೆ ನೀನು ಮಾತ್ರ ಯಾವುದೇ ಕಾರಣಕ್ಕೂ ಈ ರೀತಿ ಸಿಲುಕಿಕೊಳ್ಳಬೇಡ. ನನ್ನ ಕೈಯಲ್ಲಿ ಈಗ ಹೆಚ್ಚು ಮಾತನಾಡಲು ಸಾಧ್ಯವಿಲ್ಲ, ಸರಿಯಾದ ಸಮಯ ಬಂದಾಗ ನಾನೇ ನಿನಗೆ ಕರೆ ಮಾಡುತ್ತೇನೆ” ಎಂದು ನೋಯ್ಡಾ ಮೂಲದ ತ್ವಿಶಾ ಶರ್ಮಾ (Twisha Sharma) ಸಾವಿಗೂ ಮುನ್ನ ತನ್ನ ಆಪ್ತ ಸ್ನೇಹಿತೆ ಮೀನಾಕ್ಷಿಗೆ ಇನ್ಸ್ಟಾಗ್ರಾಮ್ ಮೂಲಕ ಕಳುಹಿಸಿದ ಕೊನೆಯ ಆಘಾತಕಾರಿ ಸಂದೇಶವು ಇಡೀ ಪ್ರಕರಣಕ್ಕೆ ಈಗ ದೊಡ್ಡ ತಿರುವು ನೀಡಿದೆ.
ಸದ್ಯ ನ್ಯಾಯಕ್ಕಾಗಿ ಒತ್ತಾಯಿಸಿ ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಮತ್ತು ಅವರ ಸಹೋದರ, ಭಾರತೀಯ ಸೇನೆಯ ಮೇಜರ್ ಹರ್ಷಿತ್ ಶರ್ಮಾ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮರು-ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಅಲ್ಲಿಯವರೆಗೆ ಮೃತದೇಹವನ್ನು ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸರಿಯಾಗಿ ಸಂರಕ್ಷಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಅಲ್ಲಿಯವರೆಗೆ ಮಗಳ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಪೋಷಕರು ಕಠಿಣ ನಿರ್ಧಾರ ತಳೆದಿದ್ದಾರೆ. ಪ್ರಸ್ತುತ ಭೋಪಾಲ್ ಪೊಲೀಸರು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದಾರೆ.

