ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಟಿಎಂಸಿ ಕೋಟೆಯನ್ನು ಛಿಧ್ರಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಂದು ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಿ ಸುವೇಂಧು ಅಧಿಕಾರಿಯವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯ ಮಾನ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸುವೇಂಧು ಅಧಿಕಾರಿ ಕುರಿತು ಮೋದಿ ಮಾತನಾಡಿರುವ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.


ಕಳೆದ ಹತ್ತು ವರ್ಷಗಳ ಹಿಂದೆ, ಅಂದರೆ 2016ರ ಸಂದರ್ಭದಲ್ಲಿ ಈ ದಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂದು ಪಶ್ಚಿಮ ಬಂಗಾಳದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಸುವೇಂಧು ಅಧಿಕಾರಿಯವರು ಬದ್ಧ ವೈರಿಗಳಾಗಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ (Pm Modi) ಅವರು ಅಂದಿನ ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ (Suvendu Adhikari) ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಕ್ಯಾಮೆರಾ ಮುಂದೆ ಲಂಚ ಪಡೆಯುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಸುವೇಂದು ಅಧಿಕಾರಿಯವರನ್ನು ಮೋದಿ ಅಂದು ಲೇವಡಿ ಮಾಡಿದ್ದರು. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆದರೆ ಇಂದು ಇಬ್ಬರು ನಾಯಕರು ಒಂದೇ ಪಾರ್ಟಿಯಲ್ಲಿದ್ದು, ಸುವೇಂಧು ಅವರು ಇಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಒಬ್ಬ ನಾಯಕನ ನೈತಿಕತೆಯ ಮೇಲೆ ಪ್ರಶ್ನೆ ಎತ್ತಿದ್ದ ಪ್ರಧಾನಿಯೇ, ಈಗ ಅದೇ ನಾಯಕನ ಹೆಗಲ ಮೇಲೆ ರಾಜ್ಯದ ಜವಾಬ್ದಾರಿ ಹೊರಿಸಿರುವುದು ಒಂದು ವಿಪರ್ಯಾಸವೇ ಸರಿ. ಹತ್ತು ವರ್ಷಗಳ ಹಿಂದೆ ಇದ್ದ ಭ್ರಷ್ಟಾಚಾರದ ಆರೋಪಗಳು ಈಗ ಮಾಯವಾಗಿವೆಯೇ ಅಥವಾ ರಾಜಕೀಯ ಲಾಭದ ಮುಂದೆ ತತ್ವಗಳು ಗೌಣವಾಗಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.
