ಮುಂಬೈ: ಕಲ್ಲಂಗಡಿ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಸಾವಿಗೀಡಾದ ಘಟನೆಗೆ ಕುರಿತಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಕುಟುಂಬದ ಸಾವು ಆಕಸ್ಮಿಕವಲ್ಲ. ಬದಲಿಗೆ ಇಲಿ ಪಾಷಾಣದಿಂದ ಸಂಭವಿಸಿದೆ ಎಂದು ವಿಧಿವಿಜ್ಞಾನ ಇಲಾಖೆಯ ವರದಿ ಖಚಿತಪಡಿಸಿದೆ.


ಪೈಧೋನಿ ಪ್ರದೇಶದ ಮೊಗಲ್ ಕಟ್ಟಡದಲ್ಲಿ ವಾಸವಿದ್ದ ಅಬ್ದುಲ್ಲಾ ಡೊಕಾಡಿಯಾ (40), ಅವರ ಪತ್ನಿ ನಸ್ತೀನ್ (35) ಮತ್ತು ಇಬ್ಬರು ಪುತ್ರಿಯರಾದ ಆಯೇಷಾ (16) ಹಾಗೂ ಜೈನಾಬ್ (13) ಮೃತಪಟ್ಟ ವ್ಯಕ್ತಿಗಳು.
ಈ ಕುಟುಂಬ ಎಪ್ರಿಲ್ 26 ರಂದು ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದು, ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಎಲ್ಲರೂ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡು ಸಾವಿಗೀಡಾಗಿದ್ದರು. ಮೊದಲಿಗೆ ಇದೊಂದು ವಿಷಾಹಾರ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಎಫ್ಎಸ್ಎಲ್ ವರದಿಯು ಸಾವಿನ ಹಿಂದಿನ ಕಾರಣವನ್ನು ಬಯಲು ಮಾಡಿದೆ.
ʼಜಿಂಕ್ ಫಾಸ್ಫೈಡ್ʼ ಎಂಬ ವಿಷಕಾರಿ ಅಂಶವು ಮೃತರ ದೇಹದ ಆಂತರಿಕ ಅಂಗಗಳಲ್ಲಿ ಪತ್ತೆಯಾಗಿದೆ. ಇದನ್ನು ಸಾಮಾನ್ಯವಾಗಿ ಇಲಿ ಸಾಯಿಸಲು ಬಳಸುವ ಮದ್ದಿನಲ್ಲಿ ಬಳಕೆ ಮಾಡಲಾಗುತ್ತದೆ. ಈ ವಿಷಕಾರಿ ಅಂಶ ದೇಹದಲ್ಲಿ ಮಾತ್ರವಲ್ಲ, ಕುಟುಂಬದವರು ತಿಂದ ಕಲ್ಲಂಗಡಿ ಹಣ್ಣಿನಲ್ಲೂ ಪತ್ತೆಯಾಗಿದೆ.
ತನಿಖೆಯ ವೇಳೆ ಪೊಲೀಸರಿಗೆ ಕುಟುಂಬದ ಮನೆಯಲ್ಲಿ ಇಲಿ ಓಡಿಸುವ ಸ್ಪ್ರೇ ಬಾಟಲಿ ದೊರಕಿದೆ. ಆದರೆ ಈ ಬಾಟಲಿಯಲ್ಲಿ ಜಿಂಕ್ ಫಾಸ್ಪೈಡ್ ಅಂಶ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಣ್ಣಿಗೆ ಈ ವಿಷಕಾರಿ ಮದ್ದು ಬಂದಿದ್ದು ಹೇಗೆ ಎನ್ನುವುದು ಪೊಲೀಸರಿಗೆ ಸವಾಲಿನ ಪ್ರಶ್ನೆಯಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆಯೋ ಅಥವಾ ಇಡೀ ಕುಟುಂಬ ಸೇರಿ ಮಾಡಿಕೊಂಡ ಆತ್ಮಹತ್ಯೆಯೇ ಎನ್ನುವ ಸಂಶಯ ಹೆಚ್ಚಾಗಿದೆ.
ಪೊಲೀಸರು ಇದೀಗ ಹಣ್ಣು ಎಲ್ಲಿಂದ ಖರೀದಿ ಮಾಡಿತ್ತು ಮತ್ತು ಮೃತ ಕುಟುಂಬವು ಯಾವುದಾದರೂ ಆರ್ಥಿಕ ಸಂಕಷ್ಟದಲ್ಲಿದ್ದರೋ ಅಥವಾ ಯಾರಾದರೂ ಶತ್ರುಗಳಿದ್ದರೇ ಎನ್ನುವ ಕೋನದಲ್ಲಿ ತನಿಖೆ ಮಾಡುತ್ತಿದ್ದಾರೆ.

