ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹಾಂದಿ ಸಮೀಪ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ರ ಪಕ್ಕದಲ್ಲಿರುವ ಮನೆಯೊಂದರಲ್ಲಿ ಸಾಂಬಾರ್ ಮಾಡಿಲ್ಲ ಎನ್ನುವ ಕಾರಣಕ್ಕೆ ಕುಟುಂಬ ಕಲಹ ಉಂಟಾಗಿರುವ ಘಟನೆ ನಡೆದಿದೆ.


ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕ ಕುಟುಂಬದಲ್ಲಿ, ನಾಗರಾಜ್ ಎನ್ನುವಾತ ಮದ್ಯಪಾನ ಮಾಡಿ ಮನೆಗೆ ಬಂದು ತನ್ನ ಅಕ್ಕ ಅಂಜಲಿ ಮತ್ತು ಅಕ್ಕನ ಮಗಳು ಮೌಲ್ಯ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ ಎನ್ನಲಾಗಿದೆ.
ಕುಟುಂಬದಲ್ಲಿ ನಡೆದ ಜಗಳ ನಂತರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ನಡೆದಿದ್ದು, ನಾಗರಾಜ್ ದೊಣ್ಣೆ ಹಿಡಿದು ಇಬ್ಬರಿಗೂ ಬೆದರಿಕೆ ಹಾಕಿದ್ದಾನೆ. ಈ ಗಲಾಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ನಡೆದಿದ್ದು, ಪರಿಣಾಮ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಜಗಳ ಬಿಡಿಸಲು ಬಂದ ಸ್ಥಳೀಯರ ಮೇಲೂ ನಾಗರಾಜ್ ಹಲ್ಲೆಗೆ ಮುಂದಾಗಿರುವ ಕುರಿತು ವರದಿಯಾಗಿದೆ. ನಂತರ ಸ್ಥಳೀಯರು ಆಲ್ದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ನಾಗರಾಜ್ನನ್ನು ವಶಕ್ಕೆ ಪಡೆದಿದ್ದಾರೆ.

