ಮಂಗಳೂರು: ಉರ್ವ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿದ್ದ ಐತ್ತಪ್ಪ ಅವರ ಕೊಲೆಯತ್ನ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಎಫ್.ಟಿ.ಎಸ್.ಸಿ-1 ತ್ವರಿತಗತಿ ನ್ಯಾಯಾಲಯವು ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.


ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಜ್ (29) ಶಿಕ್ಷೆಗಗೊಳಗಾದ ಅಪರಾಧಿ.
ಸಾಕ್ಷ್ಯ, ದಾಖಲೆಗಳು, ಪೂರಕ ಸಾಕ್ಷ್ಯವನ್ನು ಹಾಗೂ ಪ್ರತಿವಾದವನ್ನು ಆಲಿಸಿ 2 ನೇ ಆರೋಪಿಯಾದ ಮೊಹಮ್ಮದ್ ನಿಯಾಜ್ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನ ಮಾಡಿ ನ್ಯಾಯಾಧೀಶ ಮೋಹನ ಜೆ.ಎಸ್.ಅವರು ಎ.27 ರಂದು ತೀರ್ಪನ್ನು ನೀಡಿದ್ದಾರೆ.
ದಂಡದ ಒಟ್ಟು ಹಣ 50000 ರೂ ನಲ್ಲಿ 45,000 ರೂ. ಹಣವನ್ನು ಗಾಯಾಳು ಎ.ಎಸ್.ಐಗೆ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ. ಈ ಪ್ರಕರಣ 1ನೇ ಆರೋಪಿ ಶಮೀರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣದ ವಿಚಾರಣೆ ಬಾಕಿ ಇದೆ.

