Bengaluru : ಪ್ರಿಯತಮೆ ಒಬ್ಬಳು ಫಾರಿನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತ ಹೇಳಿ ಪ್ರಿಯಕರನ ಕೈಕಾಲು ಕಟ್ಟಿ ಆತನಿಗೆ ಬೆಂಕಿ ಇಟ್ಟು ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರಿನ ಬ್ಯಾಡರಹಳ್ಳಿ ಈ ಧಾರುಣ ಘಟನೆ ನಡೆದಿದೆ. ಯುವತಿಯ ಪ್ರಿಯತಮ ಕಿರಣ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೀತಿ ಹೆಸರಲ್ಲಿ ನಡೆದ ಈ ಘಟನೆ ತೀವ್ರ ಆಘಾತ ಮೂಡಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ.
ಮೃತ ಕಿರಣ್ ಮತ್ತು ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದಿದ್ದನ್ನು ನೋಡಿ ಕಿರಣ್ ಆಕೆಯ ಮನೆಗೆ ಬಂದಿದ್ದನು. ಈ ವೇಳೆ ಯುವತಿ ನಡೆಸಿದ ಕುಕೃತ್ಯಗಳು ಮೈ ನಡುಗಿಸುವಂತಿವೆ. “ನಿನಗೆ ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ” ಎಂದು ಹೇಳಿದ ಯುವತಿ, ಕಿರಣ್ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಕಿರಣ್ “ಯಾಕೆ ಇಷ್ಟು ಟೈಟ್ ಆಗಿ ಕಟ್ತಿದ್ದೀಯಾ?” ಎಂದು ಕೇಳಿದಾಗ, “ಇದು ಫಾರಿನ್ ಸ್ಟೈಲ್, ಸುಮ್ಮನಿರು” ಎಂದು ನಂಬಿಸಿದ್ದಾಳೆ.
ಕಿರಣ್ ಕೈಕಾಲು ಬಿಡಿಸಿಕೊಳ್ಳಲಾಗದೇ ಸಂಪೂರ್ಣ ಅಸಹಾಯಕನಾದ ಮೇಲೆ ಆಕೆ ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಕೃತ್ಯ ನಡೆಯುವ ದೃಶ್ಯವನ್ನು ಯುವತಿ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾಳೆ ಎಂದೂ ಹೇಳಲಾಗಿದೆ.
ಆರಂಭದಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಯುವತಿ, “ನಾನು ಟಾಯ್ಲೆಟ್ನಲ್ಲಿದ್ದೆ, ಆಗ ಸೌಂಡ್ ಬಂತು. ಹೊರಬಂದು ನೋಡಿದಾಗ ಕಿರಣ್ ಬೆಂಕಿ ಹಚ್ಚಿಕೊಂಡಿದ್ದ” ಎಂದು ಕಥೆ ಕಟ್ಟಿದ್ದಳು. ಆದರೆ ಕಿರಣ್ ಬೈಕ್ನಲ್ಲಿ ಬಂದಾಗ ಯಾವುದೇ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎಂಬುದು ಸಿಸಿಟಿವಿ ಮತ್ತು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರಿಂದಾಗಿ ಪೆಟ್ರೋಲ್ ಅನ್ನು ಯುವತಿಯೇ ಮೊದಲೇ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ.
ಪೊಲೀಸರ ಪ್ರಕಾರ ಯುವತಿ ಪ್ರೇರಣಾ ತನ್ನ ಪ್ರಿಯಕರ ತನ್ನನ್ನು ಬೇಕೆಂದೇ ದೂರವಿಡುತ್ತಿದ್ದಾನೆ ಎಂದು ಅನುಮಾನಗೊಂಡಿದ್ದಳು. ತನಗೆ ಸಮಯ ನೀಡುತ್ತಿಲ್ಲ. ತನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ತನ್ನ ಪ್ರೀತಿಯನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಕೋಪಗೊಂಡಿದ್ದಳು. ಇದೇ ಕಾರಣಕ್ಕೆ ಈ ಕೃತ್ಯ ವೆಸಗಿರಬಹುದು ಎಂದು ಶಂಕಿಸಲಾಗಿದೆ.

