Home » ಬಂಟ್ವಾಳ ಸಜಿಪನಡುವಿನಲ್ಲಿ ಎರಡು ಗುಂಪುಗಳ ಮಸೀದಿ ವಿಚಾರಕ್ಕೆ ಗಲಾಟೆ

ಬಂಟ್ವಾಳ ಸಜಿಪನಡುವಿನಲ್ಲಿ ಎರಡು ಗುಂಪುಗಳ ಮಸೀದಿ ವಿಚಾರಕ್ಕೆ ಗಲಾಟೆ

0 comments

ಮಂಗಳೂರು ಮಾ.24: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಪ್ರದೇಶದಲ್ಲಿ ಮಸೀದಿ ವಿಚಾರಕ್ಕೆ ಉಭಯ ತಂಡಗಳ ನಡುವೆ ಗಲಾಟೆ ನಡೆದಿದ್ದು, ತಲವಾರು, ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ತಲೆಮೊಗರು ಮಸೀದಿ ಸಮೀಪದಲ್ಲಿ ಗಲಾಟೆ ಸಂಭವಿಸಿದ್ದು, ಗಾಯಗೊಂಡವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಅಬ್ದುಲ್‌ ನವಾಝ್‌ (42) ಅವರು ತಮ್ಮ ಸಂಬಂಧಿ ದಾವೂದ್‌ ಜೊತೆಗೆ ಮಸೀದಿಗೆ ತೆರಳಿ ವಾಪಾಸಾಗುವ ವೇಳೆ, ಶೌಕತ್‌, ಇಸಾಕ್‌, ಸಫಿಕ್‌, ಯಾಕೂಬ್‌, ಮಹಮ್ಮದ್‌ ಮುಸ್ತಾಫಾ, ನಾಸಿರ್‌ ಮತ್ತು ನಿಝಾಲ್‌ ಸೇರಿ ಗುಂಪಾಗಿ ನಿಂತಿದ್ದವರು ಅಚಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಂತರ ಕತ್ತಿ, ದೊಣ್ಣೆಗಳಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಮಾಡಿರುವ ಆರೋಪ ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿ ಅಬ್ದುಲ್ ಗಫೂರ್ (48) ಎಂಬವರು ಪ್ರತಿದೂರು ದಾಖಲಿಸಿದ್ದು, ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್ ಮತ್ತು ಅಶ್ರಫ್ ಸಾಹೇಬ್ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಶೌಕತ್ ಅಲಿ (40) ಎಂಬವರು ನೀಡಿದ ಮತ್ತೊಂದು ದೂರಿನ ಪ್ರಕಾರ, ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಪ್ ಮತ್ತು ಆಶಿಕ್ ಮಸೀದಿ ವಿಚಾರದಲ್ಲಿ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ತಡೆಹಿಡಿಯಲು ಬಂದ ಸಫಾನಾ, ನಿಜಾಲ್, ಇಸಾಕ್ ಮತ್ತು ಆಶ್ರಫ್ ಅವರ ಮೇಲೂ ದಾಳಿ ಯತ್ನ ನಡೆದಿದೆ ಎನ್ನಲಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಸೇರಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಪೊಲೀಸರು ಬಿಎನ್‌ಎಸ್‌ ಶಸ್ತ್ರಾಸ್ತ್ರಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ತನಿಖೆ ಮಾಡುತ್ತಿದ್ದಾರೆ.

banner

You may also like