MP: ಮಧ್ಯಪ್ರದೇಶದ ಗುನಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆಯೊಂದು ಇಡೀ ದೇಶದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿದೆ. ಕಾರಣ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಡೀ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೌದು, ಪ್ರಜ್ಞಾಹೀನಾನಗಿದ್ದ 20 ವರ್ಷದ ಯುವಕನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿ ಆತನನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ ಹಾಗೂ ಅಲ್ಲಿ ಇನ್ನೇನು ದೇಹವನ್ನು ಸೀಳಬೇಕು ಎನ್ನುವಾಗ ಆ ಯುವಕನಿಗೆ ಪ್ರಜ್ಞೆ ಬಂದು ಎದ್ದು ಓಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ದೊರೆತ ಮಾಹಿತಿ ಪ್ರಕಾರ 20 ವರ್ಷದ ಯುವಕ ಹುಜ್ಮಿಲ್ ಪ್ರದೇಶದ ನಿವಾಸಿ ಜಾನ್ ಪಾರ್ಟಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಇದರ ಪರಿಣಾಮವಾಗಿ ಮಾರ್ಚ್ 11 ರಂದು, ಅವರು ವಿಷಕಾರಿ ವಸ್ತುವನ್ನು ಸೇವಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಘಾತಕಾರಿ ವಿಚಾರ ಅಂದ್ರೆ ಅಲ್ಲಿ ವೈದ್ಯರು ಆತುರದಿಂದ ಸರಿಯಾಗಿ ಪರೀಕ್ಷೆ ನಡೆಸದೆ ಮೃತಪಟ್ಟಿದ್ದಾರೆ ಎಂದು ಘೋಷಿಸಿ, ಸಂಪೂರ್ಣ ಟೆಸ್ಟ್ ಮಾಡದೆಯೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆದರೆ ಅದೃಷ್ಟಾವಶಾತ್ ಇದಾದ ಸ್ವಲ್ಪ ಸಮಯದ ನಂತರ ಅವನ ದೇಹದಲ್ಲಿ ಚಲನೆ ಉಂಟಾಗಿದ್ದು, ಸ್ವಲ್ಪ ಸಮಯದಲ್ಲೇ ಸಂಪೂರ್ಣವಾಗಿ ಪ್ರಜ್ಞೆ ಬಂದಿದೆ. ಆತ ಕಣ್ಣು ಬಿಟ್ಟು ನೋಡಿದಾಗ ತನ್ನ ಸುತ್ತಮುತ್ತಲಿನ ದೃಶ್ಯ ಕಂಡು ಭಯಭೀತನಾಗಿ ಶವಾಗಾರದಿಂದ ಬೆತ್ತಲೆಯಾಗಿ ಹೊರಗೆ ಓಡಿಹೋಗಿದ್ದಾನೆ. ಅಲ್ಲದೆ ಯುವಕ ಪ್ರಜ್ಞೆ ಮರಳಿದ ನಂತರ ಬಹಿರಂಗಪಡಿಸಿದ ವಿಷಯ ಎಂತವರನ್ನೂ ಭಯಬೀಳಿಸುತ್ತೆ. ಅದೇನೆಂದರೆ ತನಗೆ ಸಕಾಲದಲ್ಲಿ ಪ್ರಜ್ಞೆ ಮರಳಿತು. ಕೊಂಚ ತಡವಾಗಿದ್ದರೂ, ಇಲ್ಲಾ ಆಗ ಪ್ರಜ್ಞೆ ಮರಳಿಲ್ಲ ಎಂದಿದ್ದರೆ, ವೈದ್ಯರು ತನ್ನನ್ನು ಜೀವಂತವಾಗಿ ಇರಿಯುತ್ತಿದ್ದರು ಎಂದು ಅವನು ಹೇಳಿದ್ದಾನೆ.
ಅವನ ಹೇಳಿಕೆಯು ಈಗ ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕರಲ್ಲಿ ವೇಗವಾಗಿ ಹರಡುತ್ತಿದ್ದು, ಆರೋಗ್ಯ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಅಲ್ಲದೆ ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.

