High Court : ಬಾಲ್ಯ ವಿವಾಹ ತಡೆಗೆ ಸರ್ಕಾರ ನಾನಾ ರೀತಿಯ ಕಾನೂನುಗಳನ್ನು ಕೈಗೊಂಡರು ಕೂಡ ಇಂದಿಗೂ ಈ ಒಂದು ಪಿಡುಗು ನಮ್ಮ ಸಮಾಜದಲ್ಲಿ ಇಂದಿಗೂ ನಡೆಯುತ್ತಿದೆ. ಹೀಗಾಗಿ ಈ ಪಿಡುಗನ್ನು ಹೋಗಲಾಡಿಸಲು ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದ್ದು, ಅದರ ಅನ್ವಯ ಇನ್ನು ಮುಂದೆ ಬಾಲ್ಯ ವಿವಾಹ ಮಾಡಿದರೆ ಪೋಷಕರ ವಿರುದ್ಧ ಮಾತ್ರವಲ್ಲ ವಿವಾಹ ಮಾಡಿಸುವ ಪುರೋಹಿತರು ಹಾಗೂ ಛತ್ರದ ಓನರ್ ವಿರುದ್ಧವು ಕೂಡ ದೂರು ದಾಖಲಿಸಲು ಆದೇಶಿಸಿದೆ.

ಕೋವಿಡ್ ಸಾಂಕ್ರಾಮಿಕ ಯಾರನ್ನು ಯಾವಾಗ ಬಲಿ ತೆಗೆದುಕೊಳ್ಳುವುದೋ ಏನೋ, ನಾವು ಕಣ್ಮುಚ್ಚುವುದರೊಳಗೆ ಈಕೆಯ ಮದುವೆ ಮಾಡಿಬಿಡೋಣ” ಎಂದು 16 ವರ್ಷದ ಬಾಲಕಿಯನ್ನು 27ರ ವರನಿಗೆ ಕೊಟ್ಟು ಮದುವೆ ಮಾಡಿದ್ದ ಕುಟುಂಬದ ವಿರುದ್ಧ ದೂರು ದಾಖಲಾಗಿತ್ತು. ತನ್ನ ವಿರುದ್ಧ ದೇವನಹಳ್ಳಿ ಕೋರ್ಟ್ ನಲ್ಲಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಎನ್.ಮಂಜುನಾಥ (ಬಾಲಕಿಯ ಗಂಡ) ಸೇರಿ ಕುಟುಂಬದ ಒಟ್ಟು ಐವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಅಲ್ಲದೆ “ಬಾಲ್ಯವಿವಾಹ ನಡೆಸುವ, ನಿರ್ದೇಶಿಸುವ ಅಥವಾ ಪ್ರಚೋದಿಸುವ ಯಾರಾದರೂ ಆಗಲಿ, ಅದಕ್ಕೆ ಸಮಾನ ಹೊಣೆಗಾರರಾಗುತ್ತಾರೆ. ಮದುವೆ ಮಾಡಿಸುವ ಪುರೋಹಿತ, ಅದನ್ನು ಏರ್ಪಡಿಸುವ ಸಂಬಂಧಿ, ಅದನ್ನು ಸುಗಮಗೊಳಿಸುವ ಆಯೋಜಕರೂ ಸೇರಿದಂತೆ ಎಲ್ಲರೂ ಬಾಲ್ಯವಿವಾಹ ನಿಷೇಧ ಕಾಯಿದೆಯ ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧಿಗಳಾಗಿ ಕಂಬಿ ಎಣಿಸಬೇಕಾಗುತ್ತದೆ. ಕಾನೂನು ಅಜ್ಞಾನವನ್ನು ಕ್ಷಮಿಸುವುದಿಲ್ಲ” ಎಂದು ಕೋರ್ಟ್ ಹೇಳಿದೆ
