Alipura: ಇರಾನ್ (Iran) ಮೇಲೆ ಇಸ್ರೇಲ್ (Isrel) ಹಾಗೂ ಅಮೆರಿಕಾ ದಾಳಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಹತ್ಯೆ ಮಾಡಲಾಗಿದೆ. ಇದರ ಬೆನ್ನೆಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮದ ಜನರು ಧೋ ಎಂದು ಕಣ್ಣೀರು ಹಾಕಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾ ತುಂಬಾ ಹರಿದಾಡಿವೆ. ಈ ಬೆನ್ನಲ್ಲೇ ಅಲೀಪುರ ಗ್ರಾಮಸ್ಥರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಯೇ ಬಂದಿದೆ.

ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಲ್ಳಾಪುರದ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಮೂರು ದಿನ ಶೋಕಾಚರಣೆ, ಸ್ವಯಂಘೋಷಿತ ಬಂದ್ ಮಾಡಲಾಗಿದೆ. ಜನರು ಮಸೀದಿ ಬಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದೇ ವೇಳೆ ಅಮೆರಿಕ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಮಾತುಗಳು ಕೇಳಿಬಂದಿದೆ. ಅಲೀಪುರ ಜನ ಕಣ್ಣೀರಿನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಪೆಹಲ್ಗಾಂ ವೇಳೆ ಕಣ್ಣೀರು ಬರಲೇ ಇಲ್ಲ
ಮತ್ತೊಂದು ದೇಶದ ಮೇಲೆ ಆಕ್ರಮಣ ಮಾಡಿ ಅಲ್ಲಿನ ನಾಯಕನ ಹತ್ಯೆ ಖಂಡನೀಯ. ಆದರೆ ಖಮೇನಿ ಹತ್ಯೆಗೆ ಭಾರತದಲ್ಲಿ ಹಲವರು ಕಣ್ಣೀರಿಡುತ್ತಿದ್ದಾರೆ. ಇದೇ ಕಣ್ಮೀರಿಡುವ ಜನ ಪೆಹಲ್ಗಾಂ, ಪುಲ್ವಾಂ ಘಟನೆ ಸಂದರ್ಭದಲ್ಲಿ ಒಂದು ಹನಿ ಕಣ್ಣೀರು ಹಾಕಿಲ್ಲ. ಭಾರತೀಯ ಸೈನಿಕರು ಹುತಾತ್ಮರಾದಾಗ ಕಣ್ಣೀರು ಬರಲೇ ಇಲ್ಲ. ಇದೀಗ ಗಳಗಳನೇ ಅಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಪ್ರಥಮ್ ಪ್ರಶ್ನೆ
ಯಾರಿಗೂ ಬುದ್ಧಿ ಹೇಳಿ ಪ್ರಯೋಜನ ಇಲ್ಲ. ನಾವು ಮೊದ್ಲು ಸರಿ ಹೋಗ್ಬೇಕು, ನಾನು ಖಮೇನಿ ಸಾವನ್ನ ಸಂಭ್ರಮಿಸ್ತಾ ಇಲ್ಲ… ನಮ್ಮ ಯೋಧರ ಬಗ್ಗೆ ಕಾಳಜಿಯಿಂದ tweet ಮಾಡಿದೆ ಅಷ್ಟೇ! ಎಂದು ಶೀರ್ಷಿಕೆ ಕೊಟ್ಟು ಅನಿಸಿಕೆ ಹಂಚಿಕೊಂಡಿರುವ ಪ್ರಥಮ್ ಅವರು, ಖಮೇನಿ ಹತ್ಯೆಗೆ ಕಪ್ಪು ಬಟ್ಟೆ ಹಾಕಿ ಸ್ಟ್ರೈಕ್ ಮಾಡ್ತಿದ್ದೀರಲ್ಲ, ಇದೇ ಪೆಹಲ್ಗಾಮ್ನಲ್ಲಿ ನಮ್ಮವರು ಹತ್ಯೆಯಾದಾಗ ಮೂರು ದಿನ ಕಪ್ಪು ಬಟ್ಟೆ ಹಾಕಿದ್ರಾ? ಈಗ ಅಮೆರಿಕಕ್ಕಾ ಧಿಕ್ಕಾರ ಕೂಗೋ ನೀವು, ನಮ್ಮ ಯೋಧರು ಸತ್ತಾಗ ಪಾಕ್ ವಿರುದ್ಧ ಸ್ಟ್ರೈಕ್ ಮಾಡಿದ್ರಾ? ಹಿಂಗಾದ್ರೆ ದೇಶ ಉದ್ಧಾರ ಆಗೋದು ಕಷ್ಟ. ನಮ್ಮ ಯೋಧ ಸತ್ತಾಗಲೂ ನಿಮ್ಮ ಅಂಗಡಿ ಬಂದ್ ಮಾಡಿ, ದೇವ್ರು ಮೆಚ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ.
ಅಲೀಪುರ-ಇರಾನ್ ಬಾಂಧವ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರವು ಈ ಹಿಂದೆ ‘ಬೆಳ್ಳಿಕುಂಟೆ’ ಎಂದು ಕರೆಯಲ್ಪಡುತ್ತಿತ್ತು. ಈ ಗ್ರಾಮವು ಬಿಜಾಪುರದ ಆದಿಲ್ಶಾಹಿಗಳ ಕಾಲದಲ್ಲಿ ವಲಸೆ ಬಂದವರಿಂದ ‘ಅಲೀಪುರ’ವಾಗಿ ರೂಪಾಂತರಗೊಂಡಿತು ಎನ್ನುವುದು ಇತಿಹಾಸ.
ಗ್ರಾಮದ ಪ್ರತಿಯೊಬ್ಬರಿಗೂ ಇರಾನ್ ಮತ್ತು ಅರಬ್ ದೇಶಗಳೊಂದಿಗೆ ವ್ಯಾಪಾರ ಹಾಗೂ ಶಿಕ್ಷಣದ ಗಾಢ ಸಂಬಂಧವಿದೆ. ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣವಾಗಿದೆ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರೇ ಹೆಚ್ಚಿದ್ದಾರೆ. ಇಲ್ಲಿನ ಜನರು ಅಯಾತೊಲ್ಲಾ ಖಮೇನಿ ಧಾರ್ಮಿಕ ಆದೇಶಗಳನ್ನು ಪಾಲಿಸುತ್ತಿದ್ದರು. ಇಲ್ಲಿನ ಜನರಿಗೆ ಖಮೇನಿ ಧರ್ಮಗುರುವಾಗಿದ್ರು. ಖಮೇನಿ ತತ್ವ ಪಾಲಿಸುವ ದೊಡ್ಡ ಬಳಗವೇ ಇಲ್ಲಿದೆ.

