Home » ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದ ರೀತಿ ಬೃಹತ್‌ ಪರದೆ ಹಾಕಿ RSS ಶೋಭಾಯಾತ್ರೆ

ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದ ರೀತಿ ಬೃಹತ್‌ ಪರದೆ ಹಾಕಿ RSS ಶೋಭಾಯಾತ್ರೆ

0 comments

ಬಾಗಲಕೋಟೆ: ಇತ್ತೀಚೆಗೆ ಶಿವಾಜಿ ಮಹಾರಾಜರ ಜಯಂತಿ ಸಂದರ್ಭ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದಂತಹ ಘಟನೆಯು ನಡೆದಿದ್ದು, ಭಾನುವಾರ ಭವ್ಯ ಕೇಸರಿ ಶಕ್ತಿ ಪ್ರದರ್ಶನ್‌ ಆರ್‌ಎಸ್‌ಎಸ್‌ನಿಂದ ಏರ್ಪಾಡು ಮಾಡಿತ್ತು. ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ಹಾಗೂ ಬಿಗಿ ಭದ್ರತೆ ನಡುವೆ ಶೋಭಾಯಾತ್ರೆ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದ ಹಿನ್ನೆಲೆ ನಗರದಲ್ಲಿ ಭಾನುವಾರ ಹಿಂದೂ ಸಮ್ಮೇಳನ ನಿಮಿತ್ತ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ಈ ಶೋಭಾಯಾತ್ರೆಯಲ್ಲಿ ಸಕಲ ಸಮಾಜ ಮಹಾಪುರುಷರ ಸ್ತಬ್ಧಚಿತ್ರ, ಮಕ್ಕಳ ವೇಷ ಭೂಷಣ, ಡೊಳ್ಳು ಕುಣಿತ, ಹಲಗೆ ಮತ್ತು ಕರಡಿ ಮಜಲು ಹಾಗೂ ಸ್ವದೇಶಿ ವಾದ್ಯಗಳೊಂದಿಗೆ ಶೋಭಾಯಾತ್ರೆ ನಡೆಯಿತು.

ನಗರದ ವೆಂಕಟಪೇಟೆಯಲ್ಲಿ ಬರುವ ಪಾಂಚಜನ್ಯ ಶಾಖಾ ಸಂಘಸ್ಥಾನ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕಿಲ್ಲಾ ಕೊತ್ತಲೇಶ ದೇವಸ್ಥಾನ, ಟಾಂಗಾ ಸ್ಟ್ಯಾಂಡ್, ಎಂ.ಜಿ.ರೋಡ್‌, ಬಸವೇಶ್ವರ ಸರ್ಕಲ್ ಮೂಲಕ ಬಸವೇಶ್ವರ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಪಂಕಾ ಮಸೀದಿ ಹಾಗೂ ಮುಂಭಾಗದ ಮುಸ್ಲಿಂ ಸಮಾಜದವರಿಗೆ ಸೇರಿದ ಅಂಗಡಿಗಳು ಕಾಣದ ರೀತಿಯಲ್ಲಿ ಪೊಲೀಸರು ಬೃಹತ್‌ ಪರದೆಯನ್ನು ಹಾಕಿದ್ದರು. ನಗರದಲ್ಲಿ ಕೇಸರಿ ಕಮಾನ್‌ಗಳು, ಬ್ಯಾನರ್‌ ಬಂಟಿಂಗ್ಸ್‌ಗಳು ಕಾಣುತ್ತಿತ್ತು.

ಮಹಾಪುರುಷರ ಸ್ತಬ್ಧಚಿತ್ರ, ಮಕ್ಕಳ ವೇಷಭೂಷಣ, ಕರಡಿ ಮಜಲು, ಹಲಗೆ ಮಜಲು, ಡೊಳ್ಳು ಕುಣಿತ ಸೇರಿ ಸ್ವದೇಶಿ ವಾದ್ಯಗಳು ಇದ್ದವು. ಈ ಮೆರವಣಿಗೆಯಲ್ಲಿ ಅಂದಾಜು 5000ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಸೇರಿದ್ದರು. ಪಂಕಾ ಮಸೀದಿಯ ಮುಂಭಾಗದಲ್ಲಿಯೇ ಭರ್ಜರಿ ಮೆರವಣಿಗೆ ಜರುಗಿತು. ಪಂಕಾ ಮಸೀದಿ ಬಳಿ ಮೆರವಣಿಗೆ ಬಂದಾಗ ದೇಶಭಕ್ತಿ ಘೋಷಣೆ ಕೂಗುತ್ತಾ ಹಿಂದೂ ಯುವಕರು ಹೆಜ್ಜೆ ಹಾಕಿದರು. ಪೊಲೀಸರು ಪಂಕಾ ಮಸೀದಿ ಬಳಿ ಭಾರೀ ಕಟ್ಟೆಚ್ಚರ ವಹಿಸಿ, ಸರ್ಪಗಾವಲು ಹಾಕಿದ್ದರು. ಈ ಯಾತ್ರೆಯಲ್ಲಿ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿ ಹಲವರು ಭಾಗಿಯಾಗಿದ್ದರು.

You may also like