

Kodi Shri : ರಾಜ್ಯ ರಾಜಕೀಯದ ಕುರಿತು ಸಾಕಷ್ಟು ಭವಿಷ್ಯಗಳನ್ನು ನಡೆಯುವ ಕೋಡಿಮಠದ ಶ್ರೀಗಳು ಇದೀಗ ಶಿವರಾತ್ರಿ ಬಳಿಕ ರಾಜಕೀಯದ ಕುರಿತು ಮಹತ್ವದ ಭವಿಷ್ಯ ನುಡಿದಿದ್ದಾರೆ.
ಕೋಡಿಮಠದ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮುಂದಿನ ವರ್ಷದ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಮುಖ್ಯಮಂತ್ರಿ ಬದಲಾವಣೆ ನಡೆಯುವುದು ಖಚಿತ ಎಂದು ಹೇಳಿದ್ದರು. ಆದರೆ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. “ನಾನು ಈ ಮೊದಲೇ ಸಂಕ್ರಾಂತಿ ನಂತರ ಬಜೆಟ್ ಮಂಡನೆಯಾಗುತ್ತದೆ ಎಂದು ಹೇಳಿದ್ದೆ, ಅದರಂತೆಯೇ ನಡೆದಿದೆ. ಈಗ ಯುಗಾದಿ ಹಬ್ಬದ ನಂತರ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಆದರೆ, ಮುಖ್ಯಮಂತ್ರಿಗಳು ತಮ್ಮಷ್ಟಕ್ಕೆ ತಾವೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬದಲಾವಣೆ ಆಗುತ್ತದೆ. ಇಲ್ಲದಿದ್ದರೆ ಸದ್ಯಕ್ಕೆ ಸರ್ಕಾರಕ್ಕೆ ಅಥವಾ ರಾಜಕೀಯಕ್ಕೆ ಯಾವುದೇ ತೊಂದರೆಯಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಅಲ್ಲದೆ ʼಶಿವರಾತ್ರಿ ಪೂಜೆಗಾಗಿ ಕಾಶಿಗೆ ಹೋಗಿದ್ದೆವು. ವಿಶ್ವನಾಥನ ದರ್ಶನ ಆಯಿತು. ಪ್ರಯಾಗಕ್ಕೂ ಹೋಗಿದ್ದೆ. ಕರ್ನಾಟಕದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿದೆವುʼ ಎಂದು ಹೇಳಿದರು. ಕರ್ನಾಟಕದಲ್ಲಿ ಈ ವರ್ಷ ಮಳೆ-ಬೆಳೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಜಗತ್ತಿನಾದ್ಯಂತ ಸಮಸ್ಯೆ ಇದೆ. ವಿಶ್ವದಲ್ಲಿ ಯುದ್ಧ ಆಗುವ ಲಕ್ಷಣಗಳು ಜಾಸ್ತಿ ಇವೆ ಎಂದರು.