

ಕಾಸರಗೋಡು: ಕರ್ನಾಟಕ ಕೇರಳ ಗಡಿಭಾಗವಾದ ಕಾಸರಗೋಡಿನ ಆದೂರು ಮೂಲದ ನಿವಾಸಿ ಇನ್ಫ್ಲುಯೆನ್ಸರ್ ಚಿನ್ನು ಪಾಪು ಅಲಿಯಾಸ್ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರ ಆಕೆಯ ಸ್ನೇಹಿತ ಕೂಡಾ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ಸಂದೇಶ್ ಕೆ (29) ಮೃತ ವ್ಯಕ್ತಿ.
ಕಾಸರಗೋಡಿನ ಮನ್ನಿಪಾಡಿಯಲ್ಲಿರುವ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೂಲತಃ ಮುಳ್ಳೇರಿಯ ಸಮೀಪದ ಆದೂರಿನ ಆಲಂತ್ತಡ್ಕ ಮೂಲದ ರೇಷ್ಮಾ ಕಾಸರಗೋಡಿನಲ್ಲಿ ಬಾಡಿಗೆ ಮನೆಯಲ್ಲಿ ಸಂದೇಶ್ ಜೊತೆ ಕೆಲ ಸಮಯದಿಂದ ವಾಸವಿದ್ದರು. ಫೆ.9 ರಂದು ರೇಷ್ಮಾ ಕಾಸರಗೋಡಿನ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ರೇಷ್ಮಾ ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದು, ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ತನಿಖೆಯ ಭಾಗವಾಗಿ ಪೊಲೀಸರು ಸಂದೇಶ್ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇದಾದ ಬೆನ್ನಲ್ಲೇ ಸಂದೇಶ್ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ನಿಗೂಢವಾಗಿದೆ. ರೇಷ್ಮಾ ಅವರಿಗೆ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಓರ್ವ ಮಗ ಇದ್ದಾನೆ. ರೇಷ್ಮಾ ಮೃತದೇಹ ಪತ್ತೆಯಾದ ಬೆನ್ನಲ್ಲೇ ಸಂದೇಶ್ನನ್ನು ಪೊಲೀಸರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಆಕೆಯ ಸಾವು ಆತನ ಮನಸ್ಸಿಗೆ ಬಹಳಷ್ಟು ನೋವು ನೀಡಿತ್ತು. ಇದು ಆತ್ಮಹತ್ಯೆಗೆ ಕಾರಣವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.