

High Court : ಕೋಮು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಇರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂಬುದಾಗಿ ಕರ್ನಾಟಕ ಸರ್ಕಾರವು ಹೈಕೋರ್ಟ್ ನಲ್ಲಿ ಪ್ರತಿಪಾದನೆ ಮಾಡಿದೆ.
ಕೋಮು ದ್ವೇಷದ ಮಾತುಗಳನ್ನಾಡಿದ ಸಂಬಂಧ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರವಾದ ವಿಡಿಯೊ ಆಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಈ ವಿಚಾರವಾಗಿ ಸರ್ಕಾರವು ವಾದ ಮಂಡಿಸಿಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಕೋಮುದ್ವೇಷ ಭಾಷಣ ಮಾಡುವುದು ಹವ್ಯಾಸವಾಗಿದ್ದು, ಸಮುದಾಯಗಳು ಇರಲಿ, ಅವರು ದೇವರುಗಳನ್ನೂ ಬಿಟ್ಟಿಲ್ಲ. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಬಲವಾಗಿ ಪ್ರತಿಪಾದಿಸಿತು.
ಪ್ರಭಾಕರ ಭಟ್ ಅವರ ಭಾಷಣವು ಕಾನೂನಿಗೆ ವಿರುದ್ಧವಾಗಿದ್ದು, ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ದ್ವೇಷ ಕಾರಿದ್ದಾರೆ. ಇತರರನ್ನು ಪ್ರಚೋದಿಸಿದ್ದಾರೆ. ಪ್ರಭಾಕರ್ ಭಟ್ ಅವರು ರಾಜಕಾರಣಿಯಲ್ಲ. ಇದು ರಾಜಕೀಯ ಪ್ರೇರಿತ ದ್ವೇಷ ಭಾಷಣವಲ್ಲ. ಯುವಕರನ್ನು ಅನ್ಯ ಕೋಮುಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ವಿವೇಕಾನಂದ ಜಯಂತಿಯಲ್ಲಿ ಪ್ರಭಾಕರ ಭಟ್ ಮಾಡಿರುವ ಭಾಷಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಸಹ ಸಲ್ಲಿಸಲಾಗಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದು, ಅಲ್ಲಿ 1,500-2,000 ವಿದ್ಯಾರ್ಥಿಗಳಿದ್ದಾರೆ. ಅಲ್ಲಿ ಕಲಿಯುತ್ತಿರುವ ಎಲ್ಲವೂ ಯುವ ಮನಸ್ಸುಗಳು, ಭಾಷಣ ಅವರ ಮನಸ್ಸಿನ ಮೇಲೆ ಬೇರೆಯದೇ ಪರಿಣಾಮ ಬೀರುತ್ತದೆ ಎಂದು ಸರ್ಕಾರದ ಪರ ವಕೀಲರು ವಾದಹೂಡಿದ್ದಾರೆ.













