

Gruhalakshmi : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಈ ಯೋಜನೆಯಡಿ ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿಯೊಂದು ಕುಟುಂಬದ ಯಜಮಾನಿಯರಿಗೆ ಸರ್ಕಾರವು ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ಜಮಾ ಮಾಡುತ್ತಿದೆ. ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜನರು ಮೃತರ ದಾಖಲೆಯನ್ನು ತೋರಿಸಿ ಹಣವನ್ನು ಪಡೆಯುತ್ತಿದ್ದಾರೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು ಮೃತರ ಖಾತೆಗೆ ಜಮೆಯಾದ ಗೃಹಲಕ್ಷ್ಮಿ ಹಣವನ್ನು ವಸೂಲಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಯಸ್, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಈಗಾಗಲೇ ಸುಮಾರು 1920 ಮಂದಿ ಮೃತಪಟ್ಟಿದ್ದಾರೆ. ಈ ಮೃತಪಟ್ಟವರ ಖಾತೆಗೆ ಈಗ ಬರೋಬ್ಬರಿ 2.20 ಕೋಟಿ ರೂ. ಹಣ ಜಮೆ ಆಗಿದೆ. ಹೀಗೆ ಜಮೆ ಆದ ‘ಗೃಹಲಕ್ಷ್ಮಿ’ ಹಣವನ್ನು ಹಿಂಪಡೆಯಲು ಹಾಗೂ ತಡೆಗಟ್ಟಲು ಸೂಚನೆ ನೀಡಲಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಅಲ್ಲದೆ ಈಗಾಗಲೇ ನಕಲಿ 13 ಲಕ್ಷ ಪಡಿತರ ಕಾರ್ಡ್ ರದ್ದಾಗಿವೆ. ಅರ್ಹರಿಗೆ ಪಡಿತರ ಚೀಟಿ ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳಲ್ಲಿ ಒಂದೇ ಒಂದು ಸೌಲಭ್ಯ ಪಡೆದಿಲ್ಲ ಎಂಬ ದೂರುಗಳಿಲ್ಲ. ಪ್ರಪಂಚದಲ್ಲೇ ಅತ್ಯುತ್ತಮ ಯೋಜನೆ ‘ಶಕ್ತಿ ಯೋಜನೆ’ ಎನ್ನಲಾಗಿದೆ. ಈವರೆಗೆ 206 ಕೋಟಿ ಟ್ರಿಪ್ ಗಳಾಗಿವೆ ಎಂದು ಅವರು ಹೇಳಿದ್ದಾರೆ.













