

Adhar Card : ಇಂದು ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆಯುವಲ್ಲಿ ಅಥವಾ ಯಾವುದಾದರೂ ಮಹತ್ಪದ ದಾಖಲೆಗಳನ್ನು ಗಳಿಸಿಕೊಳ್ಳುವಲ್ಲಿ ಆಧಾರ್ ಕಾರ್ಡ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಇಂದು ಆಧಾರ್ ಕಾರ್ಡನ್ನು ಬಳಸಿಕೊಂಡು ಅನೇಕ ಮೋಸದ ಜಾಲಗಳು ಸೃಷ್ಟಿಯಾಗಿ ವಂಚನೆಯನ್ನು ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು 2.5 ಕೋಟಿ ಆಧಾರ್ ಕಾರ್ಡ್ ಗಳನ್ನು ರದ್ದುಗೊಳಿಸಿ ಘೋಷಣೆ ಹೊರಡಿಸಿದೆ.
ಹೌದು, ದೇಶಾದ್ಯಂತ ನಡೆಸಿದ ದೊಡ್ಡ ಮಟ್ಟದ ‘ಸ್ವಚ್ಛತಾ ಅಭಿಯಾನ’ದಲ್ಲಿ ಸುಮಾರು 2.5 ಕೋಟಿಗೂ ಹೆಚ್ಚು ಮೃತ ವ್ಯಕ್ತಿಗಳ ಆಧಾರ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಸತ್ತವರ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಗಳಿಗೆ ಈಗ ಬ್ರೇಕ್ ಬಿದ್ದಂತಾಗಿದೆ. ಪ್ರಸ್ತುತ ಭಾರತದಲ್ಲಿ ಸುಮಾರು 134 ಕೋಟಿ ಜನರು ಸಕ್ರಿಯ ಆಧಾರ್ ಕಾರ್ಡ್ ಹೊಂದಿದ್ದು, ಡೇಟಾಬೇಸ್ ಅನ್ನು ಅಚ್ಚುಕಟ್ಟಾಗಿ ಇಡುವುದು ಸರ್ಕಾರದ ಗುರಿಯಾಗಿದೆ.
ಈ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಸರ್ಕಾರದ ಈ ಕಾರ್ಯಾಚರಣೆಯು ಕೇವಲ ಕಾರ್ಡ್ಗಳನ್ನು ರದ್ದು ಮಾಡುವುದಲ್ಲ, ಬದಲಿಗೆ ಸರ್ಕಾರದ ಹಣವು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದಾಗಿದೆ ಎಂದು ಅವರು ತಿಳಿಸಿದ್ದಾರೆ. ಸತ್ತ ವ್ಯಕ್ತಿಯ ಆಧಾರ್ ಕಾರ್ಡ್ ಬಳಸಿ ಪಿಂಚಣಿ ಅಥವಾ ಇತರ ಸವಲತ್ತುಗಳನ್ನು ಪಡೆಯುವುದನ್ನು ನಿಲ್ಲಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.













