

ನವದೆಹಲಿ: ಆಶಿಶ್ ಮತ್ತು ಅಂಜಲಿ ಇಬ್ಬರೂ ಮದುವೆಯಾಗಿ ಮೂರು ತಿಂಗಳಷ್ಟೇ ಆಗಿತ್ತು. ಇಬ್ಬರೂ ಬಹಳ ಅನ್ಯೋನ್ಯವಾಗಿಯೇ ಇದ್ದರು. ಒಂದು ದಿನ ರಾತ್ರಿ ಅವರಿಬ್ಬರೂ ರಾತ್ರಿ ವಾಕಿಂಗ್ ಗೆಂದು ಹೋಗಿದ್ದರು. ಆಗ ವಾಹನವೊಂದು ಬಂದು ಆಶಿಶ್ಗೆ ಡಿಕ್ಕಿ ಹೊಡೆದಿತ್ತು. ಅಂಜಲಿಯ ಕಣ್ಣೆದುರೇ ಆಶಿಶ್ ದೂರಕ್ಕೆ ಹಾರಿ ಬಿದ್ದು, ಪ್ರಾಣ ಬಿಟ್ಟಿದ್ದ. ಆಕೆ ಸಹಾಯಕ್ಕೆಂದು ಕಿರುಚಾಡಿದ್ದಾಳೆ ಆಗ ವಾಹನದಿಂದ ಇಳಿದ ಕೆಲವು ಮಂದಿ ಆಕೆಯ ಮೈಮೇಲಿದ್ದ ಒಡವೆಯನ್ನು ದೋಚಿಕೊಂಡು ಆಕೆಯನ್ನು ತಳ್ಳಿ ಪರಾರಿಯಾಗಿದ್ದರು. ಇದು ಅಂಜಲಿ ಪೊಲೀಸರ ಬಳಿ ಹೇಳಿದ ಕತೆ.

ಹಾಗಾಗಿ ಪೊಲೀಸರೂ ಇದನ್ನು ಮೊದಲು ಅಪಘಾತ ಎಂದೇ ಭಾವಿಸಿದ್ದರು. ಆದರೆ ಅಂಜಲಿಯ ಮೇಲೆ ಪೊಲೀಸರಿಗೆ ಅದ್ಯಾಕೋ ಸಣ್ಣ ಅನುಮಾನ ಮೂಡಿತ್ತು. ಏಕೆಂದರೆ ಇದೇ ರೀತಿಯ ಘಟನೆ ಕೆಲವು ತಿಂಗಳ ಹಿಂದೆ ಮೇಘಾಲಯದಲ್ಲಿ ನಡೆದ ಹನಿಮೂನ್ ಮರ್ಡರ್ ಕಾರಣ. ಈ ದೃಷ್ಟಿಕೋನದಿಂದ ಪೊಲೀಸರು ಅಂಜಲಿ ಮೇಲೆ ನಿಗಾ ಇಟ್ಟಿದ್ದರು. ಮತ್ತೊಮ್ಮೆ ತಮ್ಮದೇ ಸ್ಟೈಲಿನಲ್ಲಿ ಪೊಲೀಸರು ತನಿಖೆ ಮಾಡಿದಾಗ ಹೊರ ಬಿತ್ತು ನೋಡಿ ಅಸಲಿ ವಿಷಯ. ಹೌದು, ಅಂಜಲಿ ತನ್ನ ಗೆಳೆಯ ಸಂಜು ಜೊತೆ ಸೇರಿ ಗಂಡ ಆಶಿಶ್ ಕೊಲೆಗೆ ಸಂಚು ರೂಪಿಸಿದ್ದಳು ಎನ್ನುವುದು ಬಯಲಾಗಿದೆ. ಹೀಗಾಗಿ ಮೇಘಾಲಯದ ರೀತಿಯಲ್ಲಿಯೇ ರಾಜಸ್ಥಾನದ ಹನಿಮೂನ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಅಂಜು ಮತ್ತು ಆಶಿಶ್ ಮೂರು ತಿಂಗಳ ಹಿಂದೆ ವಿವಾಹವಾಗಿದ್ದು, ಈ ಮದುವೆಯಿಂದ ಅಂಜು ಅತೃಪ್ತಳಾಗಿದ್ದಳು. ತನ್ನ ತಾಯಿ ಮನೆಗೆ ಬಂದಿದ್ದ ಈಕೆ ಅಲ್ಲಿ ತನ್ನ ಮಾಜಿ ಗೆಳೆಯ ಸಂಜು ಜೊತೆ ಮತ್ತೆ ಮಾತುಕತೆ ಶುರು ಮಾಡಿಕೊಂಡಳು ಮತ್ತು ಆಗಲೇ ನಡೆದಿತ್ತು ನೋಡಿ ಮಾಸ್ಟರ್ ಪ್ಲ್ಯಾನ್. ಇಬ್ಬರೂ ಸೇರಿ ಆಶಿಶ್ನ ಕೊಲೆಗೆ ಯೋಜನೆ ರೂಪಿಸಿದ್ದರು.
ಜನವರಿ 30 ರ ರಾತ್ರಿ, ಅಂಜು ಆಶಿಶ್ನನ್ನು ವಾಕಿಂಗ್ಗೆ ಹೋಗೋಣ ಎಂದು ಹೊರಗಡೆ ಕರೆದುಕೊಂಡು ಹೋಗಿ, ಒಂದು ಪ್ರತ್ಯೇಕ ರಸ್ತೆಗೆ ಕರೆದೊ ಕೊಂಡು ಹೋಗಿದ್ದಾಳೆ. ಅಲ್ಲಿ ಆಗಲೇ ಮೂವರು ಸಂಜು ಮತ್ತು ಅವನ ಸಹಚರರಾದ ರೋಹಿತ್, ಬಾದಲ್ ಅಲಿಯಾಸ್ ಸಿದ್ಧಾರ್ಥ್ ಪೊದೆಗಳಲ್ಲಿ ಅಡಗಿಕೊಂಡಿದ್ದರೆಂದು ಹೇಳಲಾಗುತ್ತದೆ.

ಪೊದೆಗಳಲ್ಲಿ ಅಡಗಿಕೊಂಡವರು ಮೊದಲಿಗೆ ಆಶಿಶ್ ಮೆಲೆ ಅವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂದು, ನಂತರ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಿದ್ದಾರೆ. ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗೆ ನೀಡಿ, ತನ್ನ ಚಿನ್ನಾಭರಣ ದೋಚಿದ್ದಾರೆ ಎನ್ನುವಂತೆ ನಾಟಕ ಮಾಡಿದ್ದಾಳೆ. ನಂತರ ಅವಳು ಪ್ರಜ್ಞಾಹೀನಳಂತೆ ನಟಿಸಿದಳು, ಆದರೆ ಆಶಿಶ್ ದೇಹದ ಮೇಲಿದ್ದ ಗಾಯದ ಗುರುತುಗಳು ಸಂಚು ಬಯಲಾಗಲು ಕಾರಣವಾಯಿತು.
ಅಂಜು ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದುದರಿಂದ ಪೊಲೀಸರು ಅನುಮಾನಗೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.













