

FIR: ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಘಟನೆ ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದಿದ್ದು, ಈಗ ದೂರು ದಾಖಲಾಗಿದೆ. ಚರ್ಚಾ ಕಾರ್ಯಕ್ರಮದ ವೇಳೆ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ಉಂಟಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಚಾನೆಲ್ ಕಚೇರಿ ಆವರಣದಲ್ಲಿ ಪರಸ್ಪರ ಮಾತಿನ ಚಕಮಕಿ ಗಲಾಟೆಯಾಗಿ, ಹಲ್ಲೆಗೆ ಯತ್ನ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೋರಾಟಗಾರ ಬೈರಪ್ಪ ಹರೀಶ್ಕುಮಾರ್ ಅವರನ್ನು ನಿಂದಿಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಅಡಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ಸೆಪ್ಟೆಂಬರ್ 9ರಂದು ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ನಡೆದಿದ್ದ ಚರ್ಚಾ ಕಾರ್ಯಕ್ರಮಕ್ಕೆ ತನ್ನನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಂದು ಮಧ್ಯಾಹ್ನ 12.45ರ ಸುಮಾರಿಗೆ ಕಾರ್ಯಕ್ರಮ ಆರಂಭವಾಗಿತ್ತು. ಅದರಲ್ಲಿ ವಸಂತ್ ಗಿಳಿಯಾರ್ ಸಹ ಪಾಲ್ಗೊಂಡಿದ್ದರು. ಚರ್ಚೆಯ ವೇಳೆ ಅಭಿಪ್ರಾಯ ಭಿನ್ನತೆಯಿಂದ ವಾಗ್ವಾದ ಉಂಟಾಗಿತ್ತು. ಕಾರ್ಯಕ್ರಮ ಮುಕ್ತಾಯವಾದ ಮೇಲೆ ಎಲ್ಲವನ್ನೂ ಮರೆತು ಮನೆಯತ್ತ ಹೊರಟಿದ್ದೆ. ಸುದ್ದಿ ವಾಹಿನಿ ಕಚೇರಿ ಎದುರಿಗೆ ಪುನೀತ್ ಕೆರೆಹಳ್ಳಿ ಅವರನ್ನು ಕರೆಸಿಕೊಂಡು ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಒಡ್ಡಲಾಗಿತ್ತು. ಅಲ್ಲದೇ ಹಲ್ಲೆಗೆ ಯತ್ನಿಸಲಾಗಿತ್ತು’ ಎಂದು ಬೈರಪ್ಪ ಹರೀಶ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.













