

ರಂಗ ಚೊಚ್ಚಲ ನಿರ್ದೇಶನದ ಹಾಗೂ ಅರುಣ್ ಸೂರ್ಯ – ನಿಧಿ ಹೆಗಡೆ ನಾಯಕ – ನಾಯಕಿಯಾಗಿ ನಟಿಸಿರುವ ʼರಾವಣರಾಜ್ಯದಲ್ಲಿ ನವದಂಪತಿಗಳುʼ ಚಿತ್ರ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಈಗಾಗಲೇ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ಬಿಡುಗಡೆಗೂ ಮೊದಲೇ ತಮ್ಮ ಚಿತ್ರ ಬೆಂಗಳೂರು ಚಿತ್ರೋತ್ಸವಕ್ಕೆ ಆಯ್ಕೆಯಾಗಿ, ಪ್ರದರ್ಶನವಾಗಿರುವುದಕ್ಕೆ ಚಿತ್ರತಂಡ ಸಂತಸಗೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ದೇಶಕ ರಂಗ, ʼಇದು ಪ್ರತಿಯೊಬ್ಬರೂ ಎದುರಿಸುತ್ತಿರುವ ಹಾಗೂ ಎಲ್ಲರ ಜೀವನಕ್ಕೂ ಹತ್ತಿರವಾಗುವ ಕಥೆ. ವರುಣ್ ಗುರುರಾಜ್ ಹಾಗೂ ಶಂಕರ್ ಗುರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಚಿತ್ರೋತ್ಸವದಲ್ಲಿ ನಮ್ಮ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ ಎಂದು ನಿರ್ದೇಶಕ ರಂಗ ತಿಳಿಸಿದರು.
ನಾನು ಈ ಚಿತ್ರದಲ್ಲಿ ರಮ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ನಿಧಿ ಹೆಗಡೆ ಹೇಳಿದರು.
ʼನನ್ನ ನಿರ್ದೇಶನದ ʼಬಡವ ರಾಸ್ಕಲ್ʼ ಚಿತ್ರ ಕೂಡ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು. ಈಗ ನಾನು ನಿರ್ಮಾಣದಲ್ಲಿ ಭಾಗಿಯಾಗಿರುವ ʼರಾವಣರಾಜ್ಯದಲ್ಲಿ ನವದಂಪತಿಗಳುʼ ಚಿತ್ರ ಪ್ರದರ್ಶನವಾಗುತ್ತಿರುವುದು ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿʼ ಎಂದರು ನಿರ್ಮಾಪಕ ಶಂಕರ್ ಗುರು.
ʼನಾನು ಈ ಸಿನಿಮಾ ನಿರ್ಮಾಪಕನಷ್ಟೇ ಅಲ್ಲ. ಪ್ರಮುಖ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆʼ ಎಂದು ನಿರ್ಮಾಪಕ ವರುಣ್ ಗುರುರಾಜ್ ಹೇಳಿದರು. ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.













