ಭಾರತದಲ್ಲಿ ಇರೋರೆಲ್ಲಾ ಹಿಂದೂಗಳೇ, ಹಿಂದೂಗಳಿಲ್ಲದೆ ಜಗತ್ತೇ ಇಲ್ಲ: ಮೋಹನ್ ಭಾಗವತ್

ಹೊಸದಿಲ್ಲಿ: ಈ ಜಗತ್ತು ಉಳಿಯಬೇಕೆಂದರೆ ಅದು ಹಿಂದೂಗಳಿಂದ ಮಾತ್ರವೇ .ಹಿಂದೂಗಳು ಇಲ್ಲದೆ ಜಗತ್ತೇ ಇಲ್ಲ. ಇದಕ್ಕಾಗಿ ಹಿಂದೂ ಸಮಾಜ ಅಸ್ತಿತ್ವದಲ್ಲಿರಬೇಕು ಎಂದು ಆರ್ಎಸ್ ಎಸ್ ಸರಸಂಘಚಾಲಕ ವಿ.ಮೋಹನ್ ಭಾಗವತ್ ಹೇಳಿದ್ದಾರೆ.
ಅವರು 3 ದಿನಗಳ ಮಣಿಪುರ ಪ್ರವಾಸದಲ್ಲಿದ್ದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಹಿಂದೂ ಸಮಾಜ ಅಮರ. ಗ್ರೀಸ್, ಈಜಿಪ್ಟ್ ರೋಮ್ ನಾಗರಿಕತೆಗಳು ನಶಿಸಿ ಹೋದರೂ ಭಾರತೀಯ ನಾಗರಿಕತೆ ಮಾತ್ರ ಹಾಗೆಯೇ ಇದೆ. ಇದರರ್ಥ ನಮ್ಮ ನಾಗರಿಕತೆಯಲ್ಲಿ ಏನೋ ವಿಶೇಷ ಇದೆ. ಹೀಗಾಗಿಯೇ ನಾವು ಇನ್ನೂ ಇಲ್ಲಿದ್ದೇವೆ” ಎಂದರು.

ನಮ್ಮ ಸಮಾಜದಲ್ಲಿ ನಾವೊಂದು ಜಾಲವನ್ನು ಸೃಷ್ಟಿಸಿದ್ದೇವೆ. ಅದರಿಂದಾಗಿ ಹಿಂದೂ ಸಮಾಜ ಸದಾ ಇರುತ್ತದೆ. ಭಾರತದಲ್ಲಿ ಯಾರೂ ಹಿಂದೂಯೇತರರು ಇಲ್ಲ. ಮುಸ್ಲಿಮರು, ಕ್ರಿಶ್ಚಿಯನ್ನರ ಪೂರ್ವಜರೂ ಒಂದೇ ವಂಶಸ್ಥರಾಗಿದ್ದಾರೆ ಎಂದು ಭಾಗವತ್ ಹೇಳಿದರು. ಜತೆಗೆ, ದೇಶ ಕಟ್ಟಲು ಶಕ್ತಿ ಬೇಕು. ಶಕ್ತಿ ಎಂದರೆ ಆರ್ಥಿಕ ಸಾಮರ್ಥ್ಯ. ನಮ್ಮ ಆರ್ಥಿಕತೆ ಸಂಪೂರ್ಣವಾಗಿ ಸ್ವಾವಲಂಬಿಯಾಗಿರಬೇಕು. ನಾವು ಯಾರ ಮೇಲೂ ಅವಲಂಬಿತರಾಗಬಾರದು ಎಂದು ಅವರು ಹೇಳಿ, ಸ್ವಾವಲಂಬಿಗಳಾಗಲು ಕರೆ ನೀಡಿದ್ದಾರೆ.
Comments are closed.