Home News ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ತಾಯಿ ನಿರ್ಧಾರ

ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ತಾಯಿ ನಿರ್ಧಾರ

Hindu neighbor gifts plot of land

Hindu neighbour gifts land to Muslim journalist

ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಅಕ್ಟೋಬ‌ರ್ 5ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ತಾಯಿ ಕಮಲಾತೈ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಕಮಲಾತೈರನ್ನು ಆರ್‌ಎಸ್‌ಎಸ್‌ ಆಹ್ವಾನಿಸಿತ್ತು. ಆದರೆ ಈ ಸುದ್ದಿ ಸೃಷ್ಟಿಸಿದ ವಿವಾದ, ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದಾಗಿ ಅವರು ಬಹಿರಂಗ ಪತ್ರ ಮುಖೇನ ತಿಳಿಸಿದ್ದಾರೆ.

“ಅಕ್ಟೋಬರ್ 5ರ ಆರೆಸ್ಸೆಸ್ಸೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ನನ್ನನ್ನು ಟೀಕಿಸುವುದಲ್ಲದೇ, ನನ್ನ ಪತಿ ದಾದಾಸಾಹೇಬ್ ಗವಾಯಿ ಎಂದೇ ಜನಪ್ರಿಯರಾಗಿರುವ ಆರ್.ಎಸ್. ಗವಾಯಿ (ಬಿಹಾರದ ಮಾಜಿ ರಾಜ್ಯಪಾಲರು) ವಿರುದ್ಧ ಕೂಡಾ ಸಲ್ಲದ ಆರೋಪ ಹೊರಿಸಲು ಆರಂಭಿಸಿದರು. ನಾವು ಅಂಬೇಡ್ಕ‌ರ್ ಅವರ ಸಿದ್ದಾಂತದ ಪ್ರಕಾರ ಜೀವನ ನಡೆಸಿದ್ದೇವೆ. ನನ್ನ ಪತಿ ದಾದಾಸಾಹೇಬ್ ಗವಾಯಿ ಅಂಬೇಡ್ಕ‌ರ್ ಚಳವಳಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ವಿಭಿನ್ನ ಸಿದ್ಧಾಂತಗಳ ವೇದಿಕೆಯಲ್ಲಿ ನಮ್ಮ ಸಿದ್ಧಾಂತವನ್ನು ಕೂಡಾ ಹಂಚಿಕೊಳ್ಳುವುದು ಸಹ ಮುಖ್ಯವಾಗಿದೆ. ಅದಕ್ಕೆ ಧೈರ್ಯ ಬೇಕು” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
“ಅಂಬೇಡ್ಕ‌ರ್ ರ ಅಭಿಪ್ರಾಯಗಳನ್ನು ಹರಡಲು ವಿವಿಧ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದರು. ಅಲ್ಲಿಯೂ ವಂಚಿತ ವರ್ಗಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು. ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದ್ದರು. ಆದರೆ ಎಂದಿಗೂ ಹಿಂದುತ್ವವನ್ನು ಸ್ವೀಕರಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

” ಒಂದು ವೇಳೆ ನಾನು ಅಕ್ಟೋಬರ್ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಅಂಬೇಡ್ಕರ್ ರ ವಿಚಾರಗಳನ್ನು ಮಂಡಿಸುತ್ತಿದ್ದೆ” ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಪತಿಯ ವಿರುದ್ಧ ಆರೋಪಗಳ ಸುರಿಮಳೆ ಬಂದಾಗ ಹಾಗೂ ಒಂದು ಕಾರ್ಯಕ್ರಮದ ಕಾರಣ ಅವರ ವಿರುದ್ಧ ಅಪಪ್ರಚಾರ ಯತ್ನಗಳು ನಡೆದಾಗ ಬೇಸರದಿಂದ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.

1925ರಲ್ಲಿ ವಿಜಯದಶಮಿಯ ದಿನದಂದು ಸ್ಥಾಪನೆಯಾದ ಆರ್‌ಎಸ್‌ಎಸ್‌, ತನ್ನ ಶತಮಾನೋತ್ಸವ ವರ್ಷವನ್ನು ಗುರುತಿಸಲು ದೇಶದಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನ, ಸಾವಿರಾರು ಸಭೆಗಳು,ಚರ್ಚೆ, ಸಂವಾದ ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.