Uttarakannada: ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಮನೆಗೆ ಬೆಂಕಿ, ಉರಿದ ಮನೆ

Uttarakannada: ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಶನಿವಾರ ನಡೆದಿದೆ.

ಬೆಂಕಿಯ ಜ್ವಾಲೆಯಿಂದ ಮನೆ ಸಂಪೂರ್ಣ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದೆ. ಶಾಂತರಾಮ ದತ್ತ ದೇಸಾಯಿ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.
ವರದಿ ಪ್ರಕಾರ, ಶಾಂತರಾಮ ದೇಸಾಯಿ ಅವರು ಶನಿವಾರ ಸಂಜೆ ದೇವರ ಪೂಜೆಗೆಂದು ದೀಪ ಹಚ್ಚಿ ಮನೆಯಿಂದ ಹೊರಗೆ ಹೋಗಿದ್ದು, ಈ ವೇಳೆ ದೀಪದಿಂದ ಉಂಟಾದ ಬೆಂಕಿಯ ಕಿಡಿ ಹೊತ್ತಿಕೊಂಡು ಇಡೀ ಮನೆಗೆ ವ್ಯಾಪಿಸಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ದುಬಾರಿ ವಸ್ತುಗಳು, ದಾಖಲೆಗಳು ಸೇರಿ ಎಲ್ಲವೂ ಬೆಂಕಿಯ ಜ್ವಾಲೆಗೆ ಅಹುತಿಯಾಗಿದೆ. ಬೆಂಕಿಯನ್ನು ಗಮನಿಸಿದ ನೆರೆಹೊರೆ ಮಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಧಾವಿಸಿದ್ದು, ಪ್ರಯತ್ನ ಮಾಡಿದರು. ಆದರೆ ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆಯಿಂದ ಮನೆಯ ಒಳಗಿನ ಬಹುತೇಕ ವಸ್ತುಗಳು ಸುಟ್ಟು ಹೋಗಿತ್ತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ದೇವರ ದೀಪ ಕಾರಣ ಎಂದು ತಿಳಿದು ಬಂದಿದೆ.
Comments are closed.