Elephant: ಬೇಲೂರಿನ “ಕರಡಿ” ಆನೆಗೆ ಮರು ನಾಮಕರಣ – ಬಬ್ರುವಾಹನನಾದ ಪುಂಡಾನೆ

Elephant: ಹಾಸನ ಜಿಲ್ಲೆಯ ಬೇಲೂರು ನಲ್ಲಿ ಉಪಟಳ ನೀಡುತ್ತಿದ್ದ ಕರಡಿ ಹೆಸರಿನ ಆನೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗುತ್ತಿದ್ದು ಸಾರ್ವಜನಿಕ ದರ್ಶನಕ್ಕೆ ಸಿದ್ದಗೊಂಡಿದ್ದಾನೆ. ಬೇಲೂರಿನ ಸುತ್ತಮುತ್ತ ಸಾಕಷ್ಟು ಉಪಟಳ ನೀಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಈ ಆನೆಯನ್ನು ಸ್ಥಳೀಯವಾಗಿ ಕರಡಿ ಆನೆ ಎಂದು ಗುರುತಿಸಲಾಗುತ್ತಿತ್ತು. ಈ ಆನೆ ಬೇಲೂರು ಹಾಗೂ ಸಕಲೇಶಪುರದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತನ್ನ ಉಪಟಳದಿಂದ ಭಯವನ್ನು ಸೃಷ್ಟಿಸಿತ್ತು.

“ಕರಡಿ” ಆನೆ ಎಂದು ಕರೆಯಲು ಕಾರಣವೇನೆಂದರೆ, ಅದು ಆಕ್ರಮಣಕಾರಿ ಮತ್ತು ಭಯಾನಕವಾಗಿ ವರ್ತಿಸುತ್ತಿತ್ತು. 2024ರ ಏಪ್ರಿಲ್ 18ರಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಪ್ರಶಾಂತ, ಸುಗ್ರೀವ, ಭೀಮ, ಅಶ್ವತಾಮ, ಮಹೇಂದ್ರ ಸಾಕಾನೆಗಳ ಕಾರ್ಯಾಚರಣೆಯಲ್ಲಿ ಕರಡಿ ಆನೆಯನ್ನು ಸೆರೆಹಿಡಿಯಲಾಗಿತ್ತು. ಪಶುವೈದ್ಯರು ಮತ್ತು ಆನೆ ಕಾರ್ಯಪಡೆಯ ಸದಸ್ಯರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತ ಕರಿಯಪ್ಪ ಮತ್ತು ಕಾವಾಡಿ ಅನಿಶ್ ಅವರಿಂದ ಪಳಗಿದ್ದು ಕರಡಿ ಬದಲು “ಬಬ್ರುವಾಹನ” ಎಂದು ನಾಮಕರಣಗೊಂಡು ಸಾರ್ವಜನಿಕ ದರ್ಶನ ನೀಡಲಿದೆ. ಸತತವಾಗಿ ಒಂದು ವರ್ಷಗಳ ಕಾಲ 37 ವರ್ಷದ ಈ ಗಂಡಾನೆಯನ್ನು ಪಳಗಿಸಿ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.