Assam: ಗಂಡನ ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾನೆ ಎಂದ ಪತ್ನಿ ಅರೆಸ್ಟ್

Assam: ಮಹಿಳೆಯೊಬ್ಬಳು ಗಂಡನನ್ನು ಕೊಲೆ ಮಾಡಿ ಹೂತು ಹಾಕಿ, ನಂತರ ಗಂಡನ ಕುರಿತು ಕೇಳಿದವರಿಗೆಲ್ಲಾ ಆತ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾನೆ ಎಂದು ಹೇಳಿದ್ದು, ನಂತರ ಆಕೆಯ ವರ್ತನೆ ಕುರಿತು ಅನುಮಾನ ಬಂದು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದಾಗ ಅಸಲಿ ವಿಷಯ ಹೊರಗೆ ಬಂದಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧನ ಮಾಡಿದ್ದಾರೆ.

ಗಂಡನನ್ನೇ ಕೊಲೆ ಮಾಡಿ ಮಹಿಳೆಯ ಹೆಸರು ರಹೀಮಾ ಖತುನ್ ಎಂಬಾಕೆ ಈ ರೀತಿಯ ಕಥೆ ಕಟ್ಟಿದ್ದಾಳೆ. ಈ ಘಟನೆ ನಡೆದಿರುವುದು ಅಸ್ಸಾಂನ ಗುವಾಹಟಿಯಲ್ಲಿ. ಕೊಲೆಗೆ ಕೌಟುಂಬಿಕ ವಿಚಾರ ಎನ್ನಲಾಗಿದೆ. ಸಬಿಯಲ್ ರೆಹ್ಮಾನ್ (40) ಕೊಲೆಯಾದ ಗಂಡ.
ಜೂನ್ 26 ರಂದು ಗುವಾಹಟಿಯ ಪಾಂಡು ಪ್ರದೇಶದ ಜೋಯ್ಮತಿ ನಗರದಲ್ಲಿ ಈ ಘಟನೆ ನಡೆದಿದೆ. ಗುಜುರಿ ಕೆಲಸ ಮಾಡುತ್ತಿದ್ದ ಸಬಿಯಲ್ ರೆಹ್ಮಾನ್ನನ್ನು ಆತನ ಪತ್ನಿ ಕೊಲೆ ಮಾಡಿ ಮನೆಯೊಳಗೆ 5 ಅಡಿ ಆಳದ ಹೊಂಡ ತೆಗೆದು ಹೂತು ಹಾಕಿರುವ ಘಟನೆ ನಡೆದಿದೆ. ಇವರಿಬ್ಬರ ಮದುವೆ ಕಳೆದ 15 ವರ್ಷಗಳ ಹಿಂದೆ ನಡೆದಿದ್ದು, ಇಬ್ಬರು ಮಕ್ಕಳಿದ್ದಾರೆ.
ಪತಿಯನ್ನು ಕೊಲೆ ಮಾಡಿ ಹೂತಿಟ್ಟು ಒಬ್ಬೊಬ್ಬರಲ್ಲಿ ಒಂದೊಂದು ಕಥೆ ಹೇಳುತ್ತಿದ್ದ ಈಕೆಯ ಮೇಲೆ ಅನುಮಾನಗೊಂಡ ಪತಿಯ ಸಹೋದರ ಜುಲೈ 12 ರಂದು ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಜುಲೈ 13 ರಂದು ರಹೀಮಾ ಖಾತುನ್ ಗುವಾಹಟಿಯ ಜಲುಕ್ಬರಿ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ. ವೈವಾಹಿಕ ಕಲಹದಿಂದ ಆತನನ್ನು ಕೊಲೆ ಮಾಡಿರುವುದಾಗಿಯೂ, ಮನೆಯಲ್ಲಿ ಹೂತು ಹಾಕಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಗಲಾಟೆ ಜೂನ್ 26 ರಂದು ನಡೆದಿದ್ದು, ಭಾರೀ ಜಗಳದ ನಂತರ ಕೊಲೆ ಮಾಡಿರುವುದಾಗಿ ಆಕೆ ಪೊಲೀಸರಲ್ಲಿ ಹೇಳಿದ್ದಾಳೆ.
ತಪ್ಪೊಪ್ಪಿಗೆ ನಂತರ ಪೊಲೀಸರು ರೆಹಮಾನ್ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದು, ಈ ಅಪರಾಧ ಕೃತ್ಯದಲ್ಲಿ ಆರೋಪಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರಾ ಎಂದು ತಿಳಿಯಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಒಬ್ಬ ಮಹಿಳೆ ಮಾತ್ರ ಶವವನ್ನು ಅಗೆಯಲು ಇಷ್ಟು ದೊಡ್ಡ ಹೊಂಡ ತೆಗೆಯಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆಂದು ನಾವು ಶಂಕಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
Comments are closed.