ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್; ಬಂಧನದ ಬೆನ್ನಲ್ಲೇ ಜಾಮೀನು, ಬಿಡುಗಡೆ

Share the Article

ಮಂಗಳೂರು: ನಿನ್ನೆ ಸಂಜೆ ಅರೆಸ್ಟ್ ಆಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸುಹಾಸ್ ಶೆಟ್ಟಿ (Suhas Shetty) ಹತ್ಯೆ ದಿನ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಮತ್ತು ನಿನ್ನೆ ನಡೆದ ಕೊಲೆ ಹಿನ್ನೆಲೆ ಉಂಟಾದ ಮುಸ್ಲಿಂ.ಮುಖಂಡರ ಆಕ್ರೋಶ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ (Sharan Pumpwell) ಅವರನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದರು.

ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಕದ್ರಿ ಠಾಣೆಯಲ್ಲಿ (Kadri Police Station) ಎಫ್‌ಐಆರ್ ದಾಖಲಾಗಿತ್ತು. ಶರಣ್ ಪಂಪ್‌ವೆಲ್ ಬಂಧನ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ. ನಿನ್ನೆ ರಾತ್ರಿಯೇ ಶರಣ್ ಪಂಪ್‌ವೆಲ್ ಅವರನ್ನು ಪೊಲೀಸರು ಕದ್ರಿ ಠಾಣೆಯಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿದ್ದರು. ನಂತರ ಶರಣ್ ಪಂಪ್‌ವೆಲ್ ಬಂಧಿಸಿದ ಪೊಲೀಸರು ಮಂಗಳೂರಿನ ಬೋಂದೆಲ್‌ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಶರಣ್ ಪಂಪ್‌ವೆಲ್‌ಗೆ ಜಾಮೀನು ನೀಡಿದ್ದಾರೆ.

ಈ ಬಗ್ಗೆ ವಿಹೆಚ್‌ಪಿ ಮುಖಂಡ ಪ್ರದೀಪ್ ಸರಿಪಲ್ಲ ಮಾಧ್ಯಮಗಳೊಂದಿಗೆ ಮಾತನಾಡಿ, ಮುಸ್ಲಿಮರನ್ನು ಓಲೈಕೆ ಮಾಡೋಕೆ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದಿದೆ. ಸುಹಾಸ್ ಹತ್ಯೆಯ ದಿನ ಬಂದ್‌ಗೆ ಕರೆ ನೀಡಿರೋದಕ್ಕೆ ಕೇಸ್ ಆಗಿತ್ತು. ಕೇಸ್ ಆಗಿ 20 ದಿನಗಳೇ ಕಳೆದುಹೋಗಿದೆ. ಈಗ ಬಂಧನ ಮಾಡಿರೋದು ಯಾಕೆ? ನಿನ್ನೆಯ ಬಂಟ್ವಾಳದ ಘಟನೆ ಹಿನ್ನೆಲೆ ಮುಸ್ಲಿಮರನ್ನು ಓಲೈಕೆ ಮಾಡೋಕೆ ಬಂಧನ ಮಾಡಲಾಗಿದೆ. ಇದು ಜಾಮೀನಾಗುವ ಕೇಸ್, ಶರಣ್ ರನ್ನು ಜೈಲಿಗೆ ಹಾಕಲ್ಲ ಎಂದು ಕಮಿಷನರ್ ಹೇಳಿದ್ದಾರೆ. ಶರಣ್ ಪಂಪ್ ವೆಲ್‌ನನ್ನು ಜೈಲಿಗೆ ಹಾಕಿದರೆ ಮುಂದೆ ಆಗುವ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಸರ್ಕಾರ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.

ಕೊನೆಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಶರಣ್ ಪಂಪ್ ವೆಲ್ ಅವರಿಗೆ ಜಾಮೀನು ನೀಡಿ.ಬಿಡುಗಡೆ ಮಾಡಿದ್ದಾರೆ. ನಿರಾಳರಾದ ಹಿಂದೂ ಕಾರ್ಯಕರ್ತರು ನಂತರ ಚೆದುರಿದ್ದಾರೆ.

 

Comments are closed.