Hasanamba Temple: ಇಡೀ ವರ್ಷ ಉರಿಯತ್ತೆ ಹಾಸನಾಂಬೆ ದೀಪ- ವರ್ಷವಿಡೀ ದೀಪ ಉರಿಯಲು ಏನು ಮಾಡ್ತಾರೆ? ಹೇಗೆ ದೀಪ ಹಚ್ಚುತ್ತಾರೆ?

Hasanaba Temple: ದೀಪಾವಳಿ ಸಂದರ್ಭದಲ್ಲಿ ಮಾತ್ರ ಭಕ್ತರಿಗೆ ದರ್ಶನ ಕೊಡವ ತಾಯಿ ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ ತೆರೆಯಲಾಗಿದೆ. ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಕ್ಟೋಬರ್ 25ರಿಂದ ನವೆಂಬರ್​ 2 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇದೆ.

ಹಾಸನಾಂಬ ದೇವಾಲಯದಲ್ಲಿ(Hasanamba Temple)ಗರ್ಭಗುಡಿ ಬಾಗಿಲು ವರ್ಷದಲ್ಲಿ ಒಂದು ಬಾರಿ ಮಾತ್ರ ತೆರೆಯುವುದು ವಿಶಿಷ್ಟ ಸಂಪ್ರದಾಯವಾಗಿದೆ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ದಿನ ಬಾಗಿಲು ತೆರೆಯಲಾಗುತ್ತದೆ. ಸಾಮಾನ್ಯವಾಗಿ ಇದು ದೀಪಾಳಿ ಹಬ್ಬದ ಸಮಯದಲ್ಲಿ ಬರುತ್ತದೆ. ಈ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ವಾರ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತದೆ. ವರ್ಷದ ಉಳಿದ ಭಾಗಗಳಲ್ಲಿ, ದೇವಾಲಯವು ಮುಚ್ಚಿರುತ್ತದೆ. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಬೆಳಗಿದ ದೀಪ, ಅಕ್ಕಿ, ನೀರು ಮತ್ತು ಹೂಗಳನ್ನು ಒಳಗೆ ಇಡಲಾಗುತ್ತದೆ. ಗಮನಾರ್ಹವಾಗಿ, ಅವುಗಳು ಮುಂದಿನ ವರ್ಷ ದೇವಾಲಯವನ್ನು ಮತ್ತೆ ತೆರೆಯುವಾಗ ತಾಜಾ ಆಗಿರುತ್ತವೆ ಮತ್ತು ದೀಪವು ಆಗಲೂ ಉರಿಯುತ್ತಿರುತ್ತದೆ.

ದೀಪವನ್ನು ಹೇಗೆ ಹಚ್ಚಲಾಗುತ್ತೆ?
ದೇವಾಲಯಕ್ಕೆ ಗಾಣಿಗರ ಮನೆಯಿಂದ ಎಣ್ಣೆಯನ್ನು ತರಲಾಗುತ್ತದೆ. ಮಡಿ 8 ಎಳೆಯ ಬಿಳಿಯ ಪಂಚೆಯನ್ನು ಎರಡು ಭಾಗ ಮಾಡಿ, ಪುರೋಹಿತರು ಪಂಚೆಯಲ್ಲಿ ಬತ್ತಿಯನ್ನು ಹೊಸೆಯುತ್ತಾರೆ. ಅದನ್ನು ಮೂರು ದಿನ ಎಣ್ಣೆಯಲ್ಲಿ ನೆನೆಸಿ ಇಡಲಾಗುತ್ತದೆ. ನಂತರ ದೀಪಗಳಿಗೆ ಹೊಸೆದ ಬತ್ತಿಯನ್ನು ಹಾಕಿ ದೀಪವನ್ನು ವರ್ಷವಿಡೀ ಉರಿಯುವಂತೆ ಹಚ್ಚಿ ಇಡಲಾಗುತ್ತದೆ.

ಹುತ್ತದ ರೂಪದಲ್ಲಿ ನೆಲೆಸಿರೋ ಹಾಸನಾಂಬೆ:
ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರು ಅಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ದುರ್ಗೆ, ಚಾಮುಂಡಿ ಇವರು ಇಲ್ಲಿಗೆ ಬಂದರೆಂದು ಪ್ರತೀತಿ. ಅವರಲ್ಲಿ, ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇಗುಲ. (ದೇವನೊಬ್ಬನೇ ಆದರೂ ಆದಿ ಮಹರ್ಷಿಗಳು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಒಂದಾಗಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳೆ ಸಪ್ತಮಾತೃಕೆಯರು). ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ, ಬ್ರಾಹ್ಮಿದೇವಿ, ಕೆಂಚಮ್ಮ ದೇವಿ ಹೊಸಕೋಟೆಯಲ್ಲಿ ನೆಲೆಸಿದ್ದಾರೆ.

ಹಾಸನಾಂಬ ದರ್ಶನ ಸಮಯ:
ಸಾಮಾನ್ಯವಾಗಿ ಹಾಸನಾಂಬ ದೇಗುಲದಲ್ಲಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಬಾರಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಾತ್ರವಲ್ಲದೆ, ನೈವೇದ್ಯದ ಸಮಯ ಹೊರತುಪಡಿಸಿ ಉಳಿದಂತೆ ಎಲ್ಲಾ ಅವಧಿಯಲ್ಲೂ (ದಿನ ಪೂರ್ತಿ) ದರ್ಶನಕ್ಕೆ ಅವಕಾಶವಿದೆ.

ನೇರ ದರ್ಶನಕ್ಕೆ 1000 ರೂ. ಟಿಕೆಟ್:
ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಟಿಕೆಟ್ 300 ರೂ. ಟಿಕೆಟ್ ಹಾಗೂ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Leave A Reply

Your email address will not be published.