BBK 11: ಬಿಗ್‌ಬಾಸ್‌ಗೆ ನೋಟಿಸ್‌ ನೀಡಿದ ಪೊಲೀಸ್‌; ವಿಡಿಯೋ ನೀಡುವಂತೆ ಸೂಚನೆ

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಪ್ರಾರಂಭವಾಗಿದ್ದು, ಎರಡನೇ ವಾರ ಮುಗಿಯುವ ಹಂತದಲ್ಲಿದೆ. ರಾಮನಗರ ಪೊಲೀಸರು ಬಿಗ್‌ಬಾಸ್‌ಗೆ ನೋಟಿಸನ್ನು ನೀಡಿದ್ದು, ವಿಡಿಯೋಗಳನ್ನು ಪೊಲೀಸ್‌ ಠಾಣೆಯಲ್ಲಿ ಹಾಜರುಪಡಿಸಿರೆಂದು ಸೂಚನೆ ನೀಡಿದ್ದಾರೆ. ವಿಡಿಯೋ ಜೊತೆಗೆ ಸಂಭಾಷಣೆಯನ್ನೂ ನೀಡಲು ಸೂಚಿಸಲಾಗಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ಸ್ವರ್ಗ ನರಕ ಎಂಬ ಕಾನ್ಸೆಪ್ಟನ್ನು ಇಡಲಾಗಿತ್ತು. ಇಲ್ಲಿ ನರಕಕ್ಕೆಂದು ಹೋದ ಸ್ಪರ್ಧಿಗಳಿಗೆ ಊಟದ ಬದಲಿಗೆ ಗಂಜಿ, ನೆಲದ ಮೇಲೆ ಹಾಕಲಾದ ಬೆಡ್‌ನಲ್ಲಿ ನಿದ್ದೆ, ಕೂರಲು ಕುರ್ಚಿ ಇಲ್ಲ, ನೀರಿಗೆ ಒಂದು ಮಡಿಕೆ, ಶೌಚಾಲಯಕ್ಕೆಂದು ಹೋಗಲು ಸ್ವರ್ಗವಾಸಿಗಳ ಅನುಮತಿ ಇವೆಲ್ಲವನ್ನೂ ಮಾಡಬೇಕಿತ್ತು.

ನರಕವಾಸಿಗಳನ್ನು ಜೈಲಿನ ಮಾದರಿಯ ಸರಳುಗಳ ಹಿಂದೆ ಇಡಲಾಗಿತ್ತು. ಇದು ಕೆಲವೊಂದು ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವುದೇ ವ್ಯಕ್ತಿಯ ಇಷ್ಟದ ವಿರುದ್ಧವಾಗಿ, ಹಾಗೂ ಇಷ್ಟದ ಅನುಸಾರವಾಗಿ ಬಂಧನದಲ್ಲಿ ಇಡುವಂತಿಲ್ಲ, ಕನಿಷ್ಠ ಅಗತ್ಯಗಳಾದ ಪೌಷ್ಠಿಕ ಆಹಾರ, ಶೌಚಾಲಯದ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘಟನೆ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಆರೋಪ ಮಾಡಿದ್ದರು.

ಮಹಿಳೆಯ ಸಮ್ಮಾನಕ್ಕೆ ಧಕ್ಕೆ ತರುವಂತಹಾ ಹೇಳಿಕೆಗಳನ್ನು ಕೂಡಾ ಈ ಸಂದರ್ಭದಲ್ಲಿ ಕೆಲ ಸ್ಪರ್ಧಿಗಳು ನೀಡಿದ್ದರು. ಇದೀಗ ಪೊಲೀಸರಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಪತ್ರ ಬರೆದಿದ್ದರು. ಹಾಗೂ ಮಾನವ ಹಕ್ಕು ಆಯೋಗವು ಬಿಗ್‌ಬಾಸ್‌ಗೆ ನೋಟಿಸ್‌ ಕೂಡಾ ಕಳಿಸಿತ್ತು. ಹಾಗಾಗಿ ಈ ವಿಷಯ ಸಂಬಂಧ ರಾಮನಗರದ ಕುಂಬಳಗೋಡು ಪೊಲೀಸರು ಬಿಗ್‌ಬಾಸ್‌ ಆಯೋಜಕರಿಗೆ ನೋಟಿಸ್‌ ನೀಡಿದ್ದು, ಕೆಲವು ದಿನಾಂಕದ ಫೂಟೇಜ್‌, ಅದರ ಸಂಪೂರ್ಣ ಆಡಿಯೋ ನೀಡಲು ಸೂಚಿಸಲಾಗಿದೆ. ಎಡಿಟ್‌ ಮಾಡದ ರಾ ವೀಡಿಯೋವನ್ನು ಠಾಣೆಗೆ ಬಂದು ನೀಡುವಂತೆ ಹೇಳಲಾಗಿದೆ.

ಒಂದೊಮ್ಮೆ ಈ ಕುರಿತು ಅಸಡ್ಡೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೂಡಾ ನೀಡಲಾಗಿದೆ.

Leave A Reply

Your email address will not be published.